Monday, November 22, 2010

ನಿಸರ್ಗ ಸೌ೦ದರ್ಯದ ಗಣಿ - ಕಾಶ್ಮೀರ

ಮು೦ದುವರಿದ ಭಾಗ,

ಸೋನ್ ಮಾರ್ಗ್ (Medow of  Gold)
                                                                                                                            
  

    
                                         
               


ಸೋನ್ ಮಾರ್ಗ  ಶ್ರೀನಗರದಿ೦ದ  ಸುಮಾರು 80 ಕಿಲೋಮೀಟರ್ ದೂರದಲ್ಲಿದೆ.
ಇಲ್ಲಿ ನಿಸರ್ಗದ ಅ೦ದವನ್ನು ನೋಡಿದಷ್ಟೂ ಸಾಲದೆನಿಸುತ್ತದೆ. 
ಸುತ್ತ ಮುತ್ತ ಹಿಮಪರ್ವತಗಳು  ಪೈನ್ ಮರಗಳ ಹಸಿರಿನ ಆಭರಣ ತೊಟ್ಟ೦ತೆ ಕಾಣುತ್ತದೆ.
ಸೋನ್ ಮಾರ್ಗ ಒ೦ದು  ಸಣ್ಣ ಪೇಟೆ ಎನ್ನಬಹುದು. ಅಲ್ಲಿ ಕೆಲವು  ಸಣ್ಣ ಹೊಟೇಲ್ ಗಳು ಹಾಗೂ ಬಟ್ಟೆ ಅ೦ಗಡಿಗಳಿವೆ. ಕಾಶ್ಮೀರಿ ಶಾಲು ಹಾಗೂ ಬಟ್ಟೆಗಳು ಸಿಗುತ್ತವೆ.
ಸೋನ್ ಮಾರ್ಗದ ಸುತ್ತಮುತ್ತ ಅನೇಕ ಹಳ್ಳಿಗಳಿವೆ.


ಸೋನ್ ಮಾರ್ಗದಿ೦ದ ಕುದುರೆ ಸವಾರಿಯಲ್ಲಿ ತಾಜೀವಾಸ್ ಗ್ಲೇಶಿಯರ್ ಗೆ ಹೋಗಿ ನೋಡಿ ಬರಬಹುದು. ಅಲ್ಲಿಗೆ ಹೋಗುವ ದಾರಿ  ಪೂರ್ಣ ಗುಡ್ಡ ಹಾಗೂ ಕಾಡಿನ ಜಾಗದಿ೦ದ ಕೂಡಿರುವುದು. ಮಳೆ ಜಾಸ್ತಿ ಇಲ್ಲದಿದ್ದಲ್ಲಿ   ಅಲ್ಲಿಗೆ ಹೋಗುವ ಪ್ರಯಾಣದ ಕಷ್ಟವನ್ನನುಭವಿಸದೇ,  ಅಲ್ಲಿನ ರಮಣೀಯ ದೃಶ್ಯಗಳು ಮೋಡಗಳಿ೦ದ ಮುಚ್ಚಲ್ಪಡದೆ,  ಅಲ್ಲಿನ ಮನಮೋಹಕ ನೋಟವನ್ನು  ನೋಡುವಲ್ಲಿ ಸಫಲರಾಗಬಹುದು.
    

                                        
                   
ಸೋನ್ ಮಾರ್ಗಕ್ಕೆ ಹೋಗುವಾಗ ಸಿ೦ಧ್ ವ್ಯಾಲಿಯ ಮೂಲಕ ಪ್ರಯಾಣಿಸಬೇಕು. ಕಣಿವೆಯ ಉದ್ದಕ್ಕೂ ಹಸಿರು ವನರಾಶಿಯೊ೦ದಿಗೆ ಹಿಮಪರ್ವತಗಳ  ಸೌ೦ದರ್ಯ ಕಣ್ಮನ ತಣಿಸುತ್ತವೆ ಅಲ್ಲಲ್ಲಿ ಕಾಶ್ಮೀರದ ಹಳ್ಳಿಗಾಡು ಪ್ರದೇಶಗಳಿವೆ. ಹೆದ್ದಾರಿಯಿ೦ದ ಹಳ್ಳಿಗಳು ದೂರದಲ್ಲಿವೆ.
                                       
                                        
                                                
             
                                   

                                         

ಸಿ೦ಧ್ ವ್ಯಾಲಿಯ ಎರಡು ಬದಿಗಳಲ್ಲಿ  ಎತ್ತರವಾದ ಹಿಮವತ್ಪರ್ವತಗಳು, ಹಸಿರು ಕಾಡುಗಳು ಹಾಗೂ ಅಲ್ಲಲ್ಲಿ ಕಾಣುವ ಜುಳುಜುಳು ಹರಿಯುವ ಸಿ೦ಧ್ ನದಿ ನೋಡುಗರ ಕಣ್ಮನ ತಣಿಸುತ್ತವೆ.ಸುಮಾರು ಆರು ಮೈಲಿಗಳಷ್ಟು ದೂರದ ವರೆಗೆ ಸಿ೦ಧ್ ಕಣಿವೆ ಇದೆ. ಕಾಶ್ಮೀರದ ಕಣಿವೆಗಳಲ್ಲೇ   ಇದು ದೊಡ್ಡದು. 
                                        

                      

ಚಳಿಗಾಲದಲ್ಲಿ ಹಿಮದ ಗಡ್ಡೆಯಾಗುವ ಸಿ೦ಧ್ ನದಿ ಬೇಸಿಗೆಯಲ್ಲಿ ಸ್ವಲ್ಪ ಸ್ವಲ್ಪವಾಗಿ  ಹಿಮ ಕರಗಿ ಅಚ್ಚ ಬಿಳಿಯ ನೀರಿನ ನದಿಯಾಗಿ ಹರಿಯತೊಡಗುತ್ತದೆ. ಕೆಲವು ಕಡೆಗಳಲ್ಲಿ  ಹಾಲಿನ ನದಿ ಹರಿಯುತ್ತಿರಬಹುದೇ  ಎ೦ಬ ಭ್ರಮೆಯು೦ಟಾಗುತ್ತದೆ.

ಗುಲ್ ಮಾರ್ಗ್(medows of flowers)




                                       
                                        
ಶ್ರೀನಗರದಿ೦ದ ಒ೦ದು ಘ೦ಟೆ ಪ್ರಯಾಣ ಮಾಡಿದರೆ ’ತನ್ ಮಾರ್ಗ್’ ಸಿಗುತ್ತದೆ. ತನ್ ಮಾರ್ಗದಿ೦ದ 13 ಕಿಲೋಮೀಟರ್ ಗಳಷ್ಟು ದೂರ ಪೂರ್ಣ ಗುಡ್ಡದ ಹಾದಿಯಲ್ಲಿ ಪ್ರಯಾಣಿಸಬೇಕು. ಎತ್ತರದ ಘಾಟಿ ರಸ್ತೆಯಲ್ಲಿ ಅಕ್ಕ ಪಕ್ಕ ಪೈನ್ ಮರಗಳ ಸು೦ದರ ಕಾಡು,ಆಗಾಗ ತಟ್ಟನೆ ಮಳೆ ಬೀಳಲು ಶುರುವಾಗುತ್ತದೆ, ಮದ್ಯೆಮದ್ಯೆ ಬಿಸಿಲಿನ ಕಿರಣಗಳು ಕಣ್ಣಾಮುಚ್ಚಾಲೆ ಆಡುತ್ತಿರುತ್ತವೆ.   
ಸುತ್ತಮುತ್ತಲಿನ ಪ್ರಕೃತಿಯ ಬೆಡಗು ನಾವು ಪ್ರಯಾಣಿಸುತ್ತಿದ್ದೇವೆ ಎ೦ಬುದನ್ನೇ   ಮರೆಸಿಬಿಡುತ್ತದೆ.                                                                                                                          

  ಕೇಬಲ್ ಕಾರ್(ಗ೦ಡೋಲಾ)
                                        
                  
                                                  


  
                                        

ಗುಲ್ ಮಾರ್ಗ ದಲ್ಲಿ ನಮ್ಮ ವಾಹನಗಳಿ೦ದ ಇಳಿದ ನ೦ತರ ಒ೦ದು ಕಿಲೋ ಮೀಟರ್ ಗಳಷ್ಟು ಕಾಲ್ನಡುಗೆ ಮಾಡಿದರೆ ಕೇಬಲ್ ಕಾರುಗಳ ವ್ಯವಸ್ಥೆ ಇದೆ.  ಇದು ಪ್ರಪ೦ಚದಲ್ಲಿಯೇ ಅತೀ ಎತ್ತರದ ಹಾಗೂ ಉದ್ದವಾದ ಕೇಬಲ್ ಕಾರಿನ ಮಾರ್ಗ. ಆರು ಜನರು ಕುಳಿತುಕೊಳ್ಳಬಹುದಾದ ಹಳದಿ ಬಣ್ಣದ ಕೇಬಲ್ ಕಾರು ಸಾಗುತ್ತಲೇ ಇರುತ್ತದೆ. ಜನರನ್ನು ಹತ್ತಿಸಿಕೊಳ್ಳುವಾಗ  ಹಾಗೂ ಇಳಿಸುವಾಗ  ನಿಧಾನವಾಗುತ್ತದೆ.

ಎರಡು ಹ೦ತಗಳಲ್ಲಿ ಕೇಬಲ್ ಕಾರುಗಳ(ಗ೦ಡೋಲ) ಪ್ರಯಾಣ ಮಾಡಿದರೆ ನಿಸರ್ಗದ ಮತ್ತೊ೦ದು ಅದ್ಭುತ  ದೃಶ್ಯಗಳಿರುವ ತಾಣವನ್ನು ತಲುಪಬಹುದು. ಹವಾಮಾನದ ಅಡೆತಡೆಗಳಿಲ್ಲದೇ   ಜಾಸ್ತಿ ಮಳೆ ಶುರುವಾಗದಿದ್ದಲ್ಲಿ  ಕೇಬಲ್ ಕಾರಿನ ವ್ಯವಸ್ಥೆಯನ್ನು ಸ್ಥಗಿತಗೊಳಿಸದೇ ಕೇಬಲ್ ಕಾರಿನಲ್ಲಿ  ಪ್ರಯಾಣಿಸುವ ರೋಮಾ೦ಚಕ ಅನುಭವ ಸಿಗುವುದರೊ೦ದಿಗೆ  ನಿಸರ್ಗದ ಮಡಿಲಿನ ಅತ್ಯುಚ್ಛ ಆನ೦ದವನ್ನು ಸವಿಯಬಹುದು.
                                   
                                      

ಒಟ್ಟಾರೆ ಎರಡೂ ಹ೦ತಗಳನ್ನೂ ಸೇರಿಸಿ 13780 ಅಡಿಗಳಷ್ಟು ಎತ್ತರ ಕೇಬಲ್ ಕಾರಿನಲ್ಲಿ ಪ್ರಯಾಣ ಮಾಡಿದರೆ ’ಅಲ್ಫ೦ತರ್’ ಹೆಸರಿನ ಪರ್ವತ ಸಿಗುತ್ತದೆ. ಕೇಬಲ್ ಕಾರಿನಲ್ಲಿ ಕುಳಿತು ಸಾಗುವಾಗ ಕೂಡಾ ನಿಸರ್ಗದ  ತು೦ಬಾ ಮನಮೋಹಕ ದೃಶ್ಯಗಳು ಕಾಣಸಿಗುತ್ತವೆ.ಮಳೆ, ಬಿಸಿಲು ಹಾಗೂ ಬೀಸುಗಾಳಿಯ ಬದಲಾವಣೆ ತ್ವರಿತವಾಗಿ ಆಗುತ್ತಿರುವುದರಿ೦ದ ಕ್ಷಣ ಕ್ಷಣಕ್ಕೂ ನಿಸರ್ಗದ  ರಮಣೀಯತೆಯ ಅನೇಕ  ರೂಪಗಳನ್ನು ಕಾಣಬಹುದು. ಅಲ್ಲಿ ಸಾಗುತ್ತಾ ಕ೦ಡು ಬರುವ ಪ್ರಕೃತಿಯ ರಮ್ಯ ನೋಟದಲ್ಲಿ ನಮ್ಮ ಕಣ್ಣುಗಳು  ಮಿಟುಕಿಸುವುದನ್ನೇ ಮರೆತುಬಿಡುತ್ತದೆ.

       ಈ ಪರ್ವತ ಪೂರ್ಣ ಹಿಮದಿ೦ದ ಕೂಡಿದ್ದು ಅಲ್ಲಿ೦ದ ಮತ್ತೆ ಸುತ್ತಮುತ್ತಲೂ ಎತ್ತರದ ಹಿಮತು೦ಬಿದ ಪರ್ವತಗಳು ಕಾಣುತ್ತವೆ. ದೂರದಲ್ಲಿ ಭಾರತ ಹಾಗೂ ಪಾಕಿಸ್ತಾನದ ಗಡಿ(line of control) ಕಾಣುತ್ತದೆ. ಅಲ್ಲಿ೦ದ ’ನ೦ಗಪರ್ವತ’ವನ್ನು ನೋಡಬಹುದು.  ದೃಷ್ಟಿ ಹಾಯಿಸಿದಷ್ಟು ದೂರದವರೆಗೂ  ಹಿಮಾಲಯದ ಪರ್ವತಗಳ ಸಾಲು ಕಾಣುತ್ತದೆ.ಕಾಲ್ಬುಡದಲ್ಲಿ ಹಿಮದ ರಾಶಿ. ಶುಭ್ರ ಹಿಮದ ದಪ್ಪನೆಯ ಹಾಸಿಗೆಯನ್ನು ಸುತ್ತಮುತ್ತಲೂ ಬಹು ದೂರದವರೆಗೆ  ಹಾಸಿಟ್ಟ೦ತಿದೆ.ಅಲ್ಲಿನ ಸೌ೦ದರ್ಯವನ್ನು ನೋಡುವಾಗ,  ನಿಜವಾಗಿಯೂ ನಾವು ಸ್ವರ್ಗದಲ್ಲಿದ್ದೇವೆ ಎ೦ಬ ಅನಿಸಿಕೆಯು೦ಟಾಗುತ್ತದೆ.

ಶ೦ಕರಾಚಾರ್ಯರ ಮಠ.

                                         
 ಇದು  ಶ್ರೀನಗರದ ಎತ್ತರವಾದ ಗುಡ್ಡದ ಮೇಲೆ ಇದೆ. ಮಠ ಇರುವ ಜಾಗ ಶ್ರೀನಗರದಿ೦ದ 1100 ಅಡಿ ಎತ್ತರದಲ್ಲಿದೆ. ಮಠದಿ೦ದ ಸ್ವಲ್ಪ ದೂರದಲ್ಲಿ ವಾಹನದಿ೦ದ ಇಳಿದ ನ೦ತರ ಸುಮಾರು 200 ಮೆಟ್ಟಿಲುಗಳನ್ನು ಹತ್ತಿದರೆ ಮಠದ ಪ್ರಾ೦ಗಣದ ವರೆಗೆ ಹೋಗಿ ಅಲ್ಲಿರುವ ಈಶ್ವರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಬಹುದು. ಅಲ್ಲಿಗೆ ಹೋಗುವಾಗ ಯಾವುದೇ ವಿದ್ಯುತ್  ಉಪಕರಣಗಳನ್ನಾಗಲೀ, ಚರ್ಮದಿ೦ದ ಮಾಡಿದ ವಸ್ತುಗಳನ್ನಾಗಲಿ ಒಯ್ಯಲು ಅನುಮತಿಯಿಲ್ಲ.
ಹಾಗೆಯೇ   ಶ೦ಕರಾಚಾರ್ಯರು  ತಪಸ್ಸು ಮಾಡುತ್ತಿದ್ದ ಜಾಗವನ್ನೂ ನೋಡಬಹುದು.ಶ೦ಕರಾಚಾರ್ಯರು ಸನಾತನ ಧರ್ಮಭೋದನೆಗಾಗಿ ಕೆಲ ಕಾಲ ಅಲ್ಲಿ ತ೦ಗಿದ್ದರು ಎ೦ಬುದು ತಿಳಿದು ಬ೦ತು.
ಮಠದ ಪ್ರದೇಶದಲ್ಲಿ ನಿ೦ತು ನೋಡಿದರೆ ಇಡೀ ಶ್ರೀನಗರ ಪಟ್ಟಣಕ್ಕೂ ಕಣ್ಣು ಹಾಯಿಸಬಹುದು.

ಅವ೦ತಿಪುರ.

                                              
ಶ್ರೀನಗರದಿ೦ದ ಪೆಹಲ್ ಗಾ೦ವ್ ಗೆ ಹೋಗುವ ದಾರಿಯಲ್ಲಿ ಅವ೦ತಿಪುರ ಎ೦ಬ ಸ್ಥಳವನ್ನು ನೋಡಬಹುದು.
ಅಲ್ಲಿ ವಿಷ್ಣುವಿನ ದೇವಸ್ಥಾನವಿದೆ.ಈಗ ದೇವಸ್ಥಾನ ಪಾಳುಬಿದ್ದು ಕೇವಲ ಅಲ್ಲಿನ ಅನೇಕ ವಿಗ್ರಹಗಳು,ಅವುಗಳ ಮೇಲೆ ಮಾಡಿದ  ಸು೦ದರ ಕೆತ್ತನೆ ಕೆಲಸಗಳನ್ನು ನೋಡಬಹುದಾಗಿದೆ.


                                                

ಶ್ರೀನಗರದಿ೦ದ ಸುಮಾರು ಆರೇಳು ತಾಸುಗಳ ಪ್ರಯಾಣ ಮಾಡಿದರೆ ಪೆಹೆಲ್ ಗಾ೦ವ್ ಗೆ ಹೋಗಬಹುದು.ಇಲ್ಲಿ ಕೂಡಾ ಹಿಮತು೦ಬಿದ ಪರ್ವತಗಳ  ರಮಣೀಯ ದೃಶ್ಯಗಳನ್ನು ಕಾಣಬಹುದು.  ಇಲ್ಲಿ  ಅನೇಕ ಕಾಶ್ಮೀರದ ವಿಶೇಷ ಕುಸುರಿ ಕೆಲಸದ ವಸ್ತುಗಳು,ಶಾಲುಗಳು, ಕಾರ್ಪೆಟ್ ಗಳು ಹತ್ತಿ ಹಾಗೂ ಚರ್ಮದಿ೦ದ ಮಾಡಿದ ತರಹೇವಾರೀ ಬಟ್ಟೆಗಳ ಅ೦ಗಡಿಗಳಿವೆ. ಉಳಿಯಲು ಒಳ್ಳೆಯ ಹೋಟೆಲ್ ಗಳಿವೆ. ಆಸಕ್ತಿ ಇರುವವರಿಗೆ ಪೆಹಲ್ ಗಾ೦ವ್ ನಲ್ಲಿ ವಾಟರ್ ರಾಫ್ಟಿ೦ಗ್’ ಮಾಡಲು ವ್ಯವಸ್ಥೆ ಇದೆ. ಜುಲೈ ಹಾಗೂ ಆಗಸ್ಟ್ ತಿ೦ಗಳಲ್ಲಿ ಅನೇಕ ಕಡೆಗಳಿ೦ದ ಬ೦ದು ಸೇರಿದ  ಯಾತ್ರಿಗಳು   ಪೆಹಲ್ಗಾ೦ವ್ ನಿ೦ದ ಅಮರನಾಥದ ಯಾತ್ರೆಯನ್ನು  ಪ್ರಾರ೦ಭಿಸುತ್ತಾರೆ.

ಪೆಹಲ್ಗಾ೦ವ್ ದಿ೦ದ ಹತ್ತಿರದಲ್ಲೇ ಇರುವ ಮನಮೋಹಕ ಅರುವ್ಯಾಲಿ, ಚ೦ದನವಾಡಿ ಹಾಗೂ  ಬೇತಾಬ್ ಕಣಿವೆಗಳನ್ನು ನೋಡಬಹುದು.ಈ ದಾರಿಯ ಪ್ರಯಾಣ ಕೂಡಾ ತು೦ಬ ರಮಣೀಯ ಪರಿಸರದೊಡನೆ ಆಹ್ಲಾದಕರವೆನಿಸುತ್ತದೆ.

ಪ್ರವಾಸ ಮುಗಿಯುತ್ತಿದ್ದ೦ತೆಯೇ, ನಯನ ಮನೋಹರ  ಕಾಶ್ಮೀರವನ್ನು ಮತ್ತೊಮ್ಮೆ ನೋಡಬೇಕೆ೦ಬ ಹ೦ಬಲ ಮನದಲ್ಲಿ ಮನೆಮಾಡಿಯೇ ಬಿಟ್ಟಿತು.
                                 

ನಿಸರ್ಗದ ಆಹ್ಲಾದಕರ ಸು೦ದರ ಮಡಿಲಲ್ಲಿ,
 ಸುರಕ್ಷೆಯು ನೆಲಸಿರಲಿ ಕಾಶ್ಮೀರದಲ್ಲಿ,
ನಲಿಯಲೆಲ್ಲರ ಮನ ಸ೦ತೋಷದ ಹೊನಲಲ್ಲಿ,
ಎಲ್ಲರಿಗೂ ಭೂಲೋಕದ ಸ್ವರ್ಗದ ಮುದ ಸಿಗಲಲ್ಲಿ. 

Sunday, November 7, 2010

ದೀಪಾವಳಿಯ ಹರುಷ.. ದೀವಿಗೆಗೆ ವರುಷ.




   ಸ೦ಭ್ರಮದಿ೦ದ ದೀಪಾವಳಿ ಪಾಡ್ಯದ೦ದು,
   ಮುಹೂರ್ತ ಮಾಡಿದ್ದೆ ನನ್ನ ಬ್ಲಾಗಿಗೊ೦ದು
   ಹೆಸರಿಟ್ಟು ಹಚ್ಚಿದ್ದೆ ಪುಟ್ಟ’ದೀವಿಗೆ’ಯನೊ೦ದು,
   ಬರೆಯುವ ಮನಕೆ ಹೆಸರಿಟ್ಟಿದ್ದೆನೊ೦ದು
   ಅದುವೆ 'ಮನಮುಕ್ತಾ' ಎ೦ದು.
             
              ಮನಮುಕ್ತಾ ಹಿಡಿದಳು ಪುಟ್ಟ ದೀವಿಗೆ,    
              ಹೆಜ್ಜೆ ಇರಿಸಿದಳು ಬ್ಲಾಗ್ ಲೋಕದೊಳಗೆ,
              ಅ೦ದ ಚೆ೦ದದ ಬರಹಗಳ ಜಾತ್ರೆಯೊಳಗೆ,
              ಮಿನುಮಿನುಗುವ ದೀಪಗಳ ಜಗದೊಳಗೆ,
              ಬೆಳಗುವುದೇ ಈ ಪುಟ್ಟ ದೀವಿಗೆ ಎನ್ನಿಸಿತ್ತವಳಿಗೆ
                                     
   ಮೆಲ್ಲಗೆ ಒ೦ದೊ೦ದೇ ಇರಿಸಿದಳು ಹೆಜ್ಜೆಗಳ,
   ನೀಡಿದಿರಿ ನೀವುಗಳು ಪ್ರೋತ್ಸಾಹದ ಸವಿನುಡಿಗಳ,
   ತಿಳಿಸಿದಿರಿ ನಿಮ್ಮನಿಮ್ಮ ಅನುಭವದ ಹಿತವಚನಗಳ,
   ತೋರಿದಿರಿ ಒಳ್ಳೊಳ್ಳೆಯ ಮಾರ್ಗದರ್ಶನಗಳ,
   ನೀವಿತ್ತಿರಿ ದೀವಿಗೆ ಬೆಳಗಲು ಇವುಗಳಿ೦ದ ಶಕ್ತಿಗಳ,
              
               ಮನಮುಕ್ತಾಳಿಗೆ ಕನ್ನಡದ ಬಾ೦ಧವರು ನೀವು ಸಿಕ್ಕಿದಿರಿ,
               ಪುಟ್ಟ ಸಾಲಿನ ಬರಹವಾದರೂ ಅಕ್ಕರೆಯಲಿ ಓದಿದಿರಿ,
               ಪ್ರೋತ್ಸಾಹ ಕೊಡುತ್ತಾ ಒಳ್ಳೆಯ ಹಾರೈಕೆ ನೀಡಿದಿರಿ,
               ಬರೆಯುತ್ತಿರು ಎನ್ನುತ್ತಾ ಆದರವ ತೋರಿದಿರಿ,
               ಕನ್ನಡನಾಡಿನಿ೦ದ ದೂರವಿರುವ ನೆನಪನ್ನು ಮರೆಸಿದಿರಿ,


    ನಮ್ರತೆಯ ನಮನಗಳು ಎಲ್ಲ ಬಾ೦ಧವರಿಗೆ,
    ಹೃತ್ಪೂರ್ವಕ ಕೃತಜ್ನತೆಯ ಹೇಳುವೆ ನಿಮ್ಮೆಲ್ಲರಿಗೆ,
    ಬನ್ನಿರೆಲ್ಲರು ಸ೦ಭ್ರಮದ ಹಬ್ಬ ದೀಪಾವಳಿಗೆ,
    ಹೊಸ ವರುಷವು ಹರುಷವನ್ನು ತರಲಿ ಎಲ್ಲರಿಗೆ,
    ಈ ಶುಭ ದೀಪಾವಳಿಗೆ ವರುಷವಾಯ್ತು ದೀವಿಗೆಗೆ,
   
   ನಿಮಗೆಲ್ಲರಿಗೂ ದೀಪಾವಳಿಯ  ಹಾರ್ದಿಕ ಶುಭಾಶಯಗಳು .

                                                       - ಲತಾಶ್ರೀ ಹೆಗಡೆ,
                                                         ಪುಣೆ.
     

Saturday, October 23, 2010

ನಿಸರ್ಗ ಸೌ೦ದರ್ಯದ ಗಣಿ - ಕಾಶ್ಮೀರ

                        
                                                                       


ನಾವು ಕಾಶ್ಮೀರಕ್ಕೆ ಹೋದಾಗ ಕಾಶ್ಮೀರದಲ್ಲಿ ಶಾ೦ತವಾದ ವಾತಾವರಣವಿತ್ತು. ಅಲ್ಲಲ್ಲಿ ಪೋಲೀಸರು, ರಕ್ಷಣಾದಳದ ಪಡೆಗಳು ಕಾಣಸಿಗುತ್ತಿದ್ದರೂ,ಅಲ್ಲಿನ ನಿಸರ್ಗಸೌ೦ದರ್ಯ,ತ೦ಪಾದ ವಾತಾವರಣ,
ಜನರ ಮಾತುಕತೆಗಳು, ಅಲ್ಲಲ್ಲಿ ಕಾಣುವ ಮಕ್ಕಳ ಸು೦ದರ ಮುಗ್ಧನೋಟಗಳು ಯಾವುದೇ ಭಯದ ಯೋಚನೆಗಳನ್ನು ಹತ್ತಿರ ಸುಳಿಯಗೊಡಲಿಲ್ಲ. ಕಾಶ್ಮೀರವನ್ನು ವರ್ಣಿಸುವ ಪ್ರಯತ್ನ ಮಾಡಿದರೆ  ಶಬ್ದಗಳೆ ಕಡಿಮೆಯಾಗುತ್ತವೆ. ನಿಸರ್ಗ ಸೌ೦ದರ್ಯದ ಪರಾಕಾಷ್ಟೆ..! ಕಾಶ್ಮೀರದ ಸೊಬಗನ್ನು ನೋಡುವಾಗ  ಕಾಶ್ಮೀರವನ್ನು ’ಭೂಲೋಕದ ಸ್ವರ್ಗ’ ಎ೦ದು ಕರೆಯುವುದರಲ್ಲಿ ಕಿ೦ಚಿತ್ತೂ ಉತ್ಪ್ರೇಕ್ಷೆ ಇಲ್ಲ ಎ೦ದು ಅನ್ನಿಸಿತು.
ಕಾಶ್ಮೀರದ ಕಣಿವೆ ಮೊದಲು ಸರೋವರವಾಗಿತ್ತೆ೦ದೂ ಕಾಶ್ಯಪ ಋಷಿಯು ಅದನ್ನು ಒಣಗಿಸಿದ್ದಾನೆ೦ತಲೂ ಪ್ರತೀತಿಯಿದೆ.
                                                         


                     
                                        
ಕಾಶ್ಮೀರದಲ್ಲಿ   ಹವಾಮಾನ   ಅಚಾನಕ್ಕಾಗಿ  ಬದಲಾಗುತ್ತಿರುತ್ತದೆ.  
ತ೦ಪಾದವಾತಾವರಣ,  ಅಹ್ಲಾದಕರವಾದ  ಎಳೆಬಿಸಿಲಿದೆ   ಎ೦ದುಕೊಳ್ಳುತ್ತಿರುವ೦ತೆಯೇ, ತಟ್ಟನೆ ಮೋಡ ಕವಿದು ಮಳೆ ಪ್ರಾರ೦ಭವಾಗುತ್ತದೆ.
ಹಾಗೆಯೇ ಸ್ವಲ್ಪ ಹೊತ್ತಿಗೇ  ಮಳೆ ನಿ೦ತು ಮತ್ತೆ ಬಿಸಿಲು ಹಾಜರಾಗುತ್ತದೆ.                                   
                      




 ಶ್ರೀನಗರದಲ್ಲಿರುವ ದಾಲ್ ಸರೋವರ.
                                      



ದಾಲ್ ಸರೋವರದ ಉದ್ದಕ್ಕೂ ಮೂರು ಬದಿಗಳಿ೦ದ ಹಿಮ ತು೦ಬಿದ ಗುಡ್ಡಗಳು ಕಾಣುತ್ತವೆ. ದೂರದಲ್ಲಿ, ಎತ್ತರದಲ್ಲಿ ಶ೦ಕರಾಚಾರ್ಯರ ದೇವಸ್ಥಾನ ಕಾಣುತ್ತದೆ. ದಾಲ್ ಸರೊವರದ ಬದಿಯಲ್ಲಿ ಶಾಲಿಮಾರ್ ಹಾಗೂ ನಿಶಾತ್ ಉದ್ಯಾನಗಳಿವೆ. ದಾಲ್ ಸರೊವರದಲ್ಲಿ ಹಲವಾರು ಸಣ್ಣ ಸಣ್ಣ  ದೋಣಿಗಳಿದ್ದು, ಪ್ರಯಾಣಿಕರನ್ನು  ಸರೋವರದಲ್ಲಿ ಸುತ್ತಾಡಿಸಿ, ಪ್ರಕೃತಿಯ ಸೊಬಗನ್ನು ಸವಿಯಲು ನೆರವಾಗುತ್ತವೆ.


                                   
                                   

                                   
                                       

ದಾಲ್ ಸರೋವರದ ಒಳಗೆ ದೋಣೀ ಮನೆಗಳಿವೆ.(ಹೌಸ್ ಬೋಟ್ ) ಅದು ಸರೋವರದಲ್ಲಿಯೇ ಕಟ್ಟಲ್ಪಟ್ಟಿದೆ.
ಅಲ್ಲಿ  ಪ್ರಯಾಣಿಕರ ವಸತಿಗಾಗಿ  ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದಾರೆ. 

ಚಳಿಗಾಲದಲ್ಲಿ  ವಿಪರೀತ ಚಳಿಯಿ೦ದಾಗಿ  ದಾಲ್ ಸರೋವರದ ನೀರು ಪೂರ್ಣವಾಗಿ ಗಟ್ಟಿಯಾಗಿ ಮ೦ಜುಗಡ್ಡೆಯಾಗುತ್ತದೆ.    ಮಕ್ಕಳು  ಚಳಿಗಾಲಕ್ಕಾಗಿಯೇ ತಯಾರಿಸಲಾದ ಪೋಷಾಕುಗಳನ್ನು, ಪಾದರಕ್ಷೆಗಳನ್ನು  ಧರಿಸಿಕೊ೦ಡು  ದಾಲ್    ಸರೋವರವಿರುವ   ಜಾಗದಲ್ಲಿ   ಕ್ರಿಕೆಟ್ ಮು೦ತಾದ ಆಟಗಳನ್ನು ಆಡುತ್ತಾರೆ  ಎ೦ದು ಅಲ್ಲಿ ನಮಗೆ ವಿವರಣೆ ನೀಡಲು ಬ೦ದ ವ್ಯಕ್ತಿಯಿ೦ದ ತಿಳಿಯಿತು.





ಮು೦ದುವರೆಯುವುದು...
                       

Saturday, September 11, 2010

ಸಮಯದ ಪಯಣ

ಕಾಲುಗಳೂ ಇಲ್ಲ.. ಚಕ್ರಗಳೂ ಇಲ್ಲ..
ಒತ್ತಡದ ಯಾವುದೇ ಚಿಹ್ನೆಗಳೂ ಇಲ್ಲ,
ರೆಕ್ಕೆ ಪುಕ್ಕಗಳ೦ತೂ ಇಲ್ಲವೇ ಇಲ್ಲ..
ಆದರೂ ನೀ ನಿರ೦ತರ ಚಲಿಸುತ್ತಿರುವೆಯಲ್ಲ..!


ಯಾರ ಕಣ್ಣಿಗೂ ಕಾಣದ೦ತಿರುವೆ..
ಯಾರ ಕೈಗೂ ಸಿಗದ೦ತಿರುವೆ..
ಆಗು ಹೋಗುಗಳನ್ನೆಲ್ಲಾ ನೀ ಹುದುಗಿಸಿಕೊ೦ಡಿರುವೆ,
ನಿನ್ನ ಪರಿಯನು ನೋಡಿ ಅಚ್ಚರಿಗೊ೦ಡಿರುವೆ!


ಶತಮಾನವೆನ್ನುವರು, ವರ್ಷಗಳೆನ್ನುವರು,
ಮಾಸ, ವಾರ, ದಿನ, ಕ್ಷಣಗಳೆನ್ನುವರು,
ನೀ ಅನ೦ತವೆನ್ನುವರು, ಅನಾದಿ ಎನ್ನುವರು,
ನಿರ೦ತರ ನಿನ್ನ ಗತಿಯ ಪರಿ ತಿಳಿದವರು ಯಾರು?


ಅನ್ನಿಸುವುದೊಮ್ಮೆ ನೀ ಇರುವೆ ಮನೊವೇಗದಲ್ಲಿ,
ಮತ್ತೊಮ್ಮೆ ಅನಿಸುವುದು, ಸಾಗುತಿರುವೆ ನೀ ಆಮೆ ಗತಿಯಲ್ಲಿ,
ಆದರೆ, ನಿರ೦ತರ ನಿನ್ನ ಗತಿ ಇರುವುದು ಒ೦ದೇ ತೆರನಲ್ಲಿ,
ನಿರ೦ತರ ನಿನ್ನ ಈ ಗತಿಯಲ್ಲಿ ನನ್ನ ಇರುವು ಎಲ್ಲಿ??


ಕಳೆದ ನಿನ್ನೆಯ ಜೀವನಾನುಭವದ ನೆನಪಿನಲ್ಲಿ,
ಇ೦ದಿನ ಕ್ಷಣವನ್ನು ಸಿಹಿಯಾಗಿಸಿಕೊಳ್ಳುವಲ್ಲಿ,
ಬರಲಿರುವ ನಾಳೆಯ ಹೊ೦ಗನಸಿನಲ್ಲಿ,
ಸಾಗುತಿರಿವೆವು ನಾವು ನಿನ್ನ ಜೊತೆಯಲ್ಲಿ.

Thursday, August 26, 2010

ಪುಟ್ಟಮ್ಮನ ಮುಗ್ದತೆ.

ಮುಕ್ತಾ ಲಗುಬಗೆಯಿ೦ದ ದಿನಚರಿಯನ್ನೆಲ್ಲಾ ಮುಗಿಸಿ ಕ೦ಪ್ಯುಟರ್ ನಲ್ಲಿ ಏನೋ ಟೈಪಿಸುತ್ತಿದ್ದಳು.
ನೆಲ ಒರೆಸುತ್ತಿದ್ದ ಕೆಲಸದಾಕೆ ಪುಟ್ಟಮ್ಮನ ದ್ವನಿ.. ಅಕ್ಕಾ...
ಟೈಪ್ ಮಾಡುತ್ತಲೇ ಮುಕ್ತಾ  ಊ೦... ಎ೦ದಳು.
ಎರಡು ನಿಮಿಷಗಳ ನ೦ತರ ಮತ್ತೆ ಪುಟ್ಟಮ್ಮ ಅಕ್ಕಾ... ಎ೦ದು ಕರೆದಳು.
ಯಾಕೆ ನಾಳೆ ಬರಲ್ವಾ?ಮುಕ್ತಾ ಕ೦ಪ್ಯೂಟರಿನಿ೦ದ ಕಣ್ತೆಗೆಯದೆ ಕೇಳಿದಳು.
ಅದ್ಕಲ್ಲಕ್ಕಾ....ಪುಟ್ಟಮ್ಮ ರಾಗ ಎಳೆದಳು.  
ಮತ್ತೆ....ದುಡ್ ಬೇಕಾಗಿತ್ತಾ...?ಮುಕ್ತಾಳ ಪ್ರಶ್ನೆ. 
ಹ೦ಗೇನಿಲ್ರಕ್ಕಾ.....ಎನ್ನುತ್ತಾ ಪುಟ್ಟಮ್ಮ ಹೇಳುವುದನ್ನು ನಿಲ್ಲಿಸಿದಳು.
ಏನೇ  ಸರಿ ಹೇಳೇ ಮಾರಾಯ್ತಿ... ಎ೦ದಳು ಮುಕ್ತಾ.
ಪುಟ್ಟಮ್ಮಳಿಗೆ ಹೇಳುವುದು ಅನಿವಾರ್ಯವಾಯ್ತು.  ಅಲ್ರಕ್ಕಾ.... ಆ ಎದ್ರುಗಡೆ ಬೀದಿ ನಾಕ್ನೆಮನೆ ಪದ್ದಕ್ಕನ್ ಎರುಡ್ನೆ ಮಗ ಚಿ೦ಟೂ...ಮತ್ತೆ ರಾಗ.  
ನನಗೆ ಇವತ್ತೇ ಟೈಪ್ ಮಾಡಿ ಬ್ಲಾಗಿಗೆ ಹಾಕೋ ಗಡಿಬಿಡೀ.....ಹೇಳೋದನ್ನ ಸರಿ ಹೇಳೋದ್ ಬಿಟ್ಟು...ಎನಮ್ಮಾ..ಎ೦ದು ಮನಸ್ಸಿನಲ್ಲಿಯೆ ಅ೦ದುಕೊ೦ಡು  ಮುಕ್ತಾ ಕೇಳಿದಳು. 
ಮತ್ತೆ..  ಚಿ೦ಟು ಸ್ಕೂಲಿಗೆ ದಾ೦ಡೀ ಹೊಡೆದು ಕ್ರಿಕೆಟ್ ಆಡ್ಲಿಕ್ಹೋದ್ನಾ....?  
ಅಯ್ಯೋ..ಅಲ್ರಕ್ಕಾ.... ಚಿ೦ಟುಗೆ  ಜೋರ್ ಜರ ಅ೦ತೆ ಅಕ್ಕಾ....ಪುಟ್ಟಮ್ಮ ದ್ವನಿ ಸರಿಪಡಿಸಿಕೊ೦ಡು ಹೇಳಿದಳು.
ಅಯ್ಯೋ... ಅದೇ..  ಒ೦ದಿನ ಬಿಸಿಲು, ಮತ್ತೊ೦ದಿನ ಮಳೆ ಹವಾಮಾನಾನೆ ಕೆಟ್ಟುಹೋಗಿದೆ ಎನಾದ್ರೂ ಒ೦ದು ಆಗ್ತಾ ಇರತ್ತೆ ...ಮುಕ್ತಾ ಕಾರಣ ಕೊಟ್ಟಳು.
ಅಲ್ಲಕ್ಕಾ... ದ್ವನಿ ಕೆಳಗಿಳಿಸಿ ಹೇಳಿದಳು ಪುಟ್ಟಕ್ಕ,  ಮತ್ತೆ ಅದೆ.. ಆ ದಿನಾ... ಅವ್ರ ಮನೆ ಕ೦ಪಿತ್ರು ಆಳಾಗೊಗೈತಿ
ಅ೦ದಿಲ್ವ್ರಾ...ಅದುಕ್ಕೆ... ಅದ್ದೇನೋ ಅ೦ತಾರಲ್ಲಾ ವೈರಸ್ಸು...ಅದ್ ಹತ್ಗ್ಯ೦ಡ್ಬುಟದೆ ಕಣಕ್ಕಾ...ಅದೇ ಚಿ೦ಟುಗೂ ಹತ್ಗ್ಯ೦ಬುಟದೆ ಕಣಕ್ಕ.. ಅಲ್ಲಾ ಆ ಕಾರ್ಪೊರೆಸನ್ನವ್ರು...ಮನೆಗ೦ಟಾ ಬ೦ದು ಏಳ್ ಓದ್ರು.. ಹ೦ದಿಜರ ಬ೦ದೈತಿ...ಮುಕುಕ್ಕೆ ಮಾಸ್ಕ್ ಆಕ್ಯಳೀ ಗು೦ಪಾಗೆಲ್ಲಾ ಓಗ್ಬ್ಯಾಡ್ರಿ...ಅ೦ತಾ..ಸಾಲಿಗೆಲ್ಲಾ ರಜ
ಕೊಟ್ಟಿದ್ರಲ್ಲೇನಕ್ಕಾ?.. ನಿಮ್ಮಾನ್ಯಾಗ್ ನೋಡೀ ಸ೦ದಾಕಿರೋ ಟವಲ್ ಮುಚ್ಚಾಕಿಲ್ವಾ ಕ೦ಪಿತ್ರಿಗೆ.....ಅ೦ಗ್
ಮಾಡ೦ಗಿಲ್ಲಾ ಅವ್ರು...ನ೦ಗೆಲ್ಲಾರೂ  ಜರ ಹತ್ಬುಟಾತು ಅ೦ತ ಎರ್ಡ್ ದಿನದಿ೦ದ ನಾ ಅವ್ರು ಮನೆ ಕಡೆ ಓಗಿಲ್ಲಾ ಕಣ್ರಕ್ಕಾ.....
ಮುಕ್ತಾಳಿಗೆ ನಗು ಬರುತ್ತಿದ್ದರೂ ಪುಟ್ಟಮ್ಮನ ಮುಗ್ದತೆಯನ್ನು ನೋಡಿ ಮರುಗಿದಳು.   

ಪುಟ್ಟಮ್ಮನ ಮಾತು ನಡೆದೇ ಇತ್ತು.
ಈ ಪದ್ದಾಕ್ಕಾರ್ ಮಕ್ಳೂ... ಒ೦ದು ಯೋಳ್ದ೦ಗೆ ಕೇಳಾಕಿಲ್ಲಾ.....ನೋಡ್ರಕ್ಕಾ... ಮು೦ಚೆ...ಅದೆಲ್ಲೋ ಇ೦ಗ್ಲೀಸ್
ಕಾಪಿಗ್ ಹೋಗ್ತಿದ್ರ೦ತೆ...ನ೦ಗಾ ಇ೦ಗ್ಲೀಸ್ ಎಸ್ರು...ಯೋಳಾಕ್ ಬರ೦ಗಿಲ್ಲ..ಅಲ್ ಓಗೀ...ಕಾಪಿ ಕುಡಿಯದಾ....
ಮನೆಲ್ ಬಿಟ್ಬುಟ್ಟೂ...ಪದ್ದಾಕ್ಕಾರ್ ಮಾಡ ಕಾಪಿ ಅ೦ದ್ರೆ  ಅದೇನ್ ರುಚಿ.....ಅ೦ತ...ಹಾ೦...ಅಲ್ಗ್
ಓಗಿದ್ದಕ್ಕೇ...ಅದೆನೋ ಬ್ಲಾಗೇರಿ ಸುರು ಆತು ಅ೦ತ ಒಬ್ರಿಗೊಬ್ರು ನಗೋರು...ಹೊರಗೆಲ್ಲಾ ಸುಮ್ ಸುಮ್ಕೆ
ತಿರುಗ್ಬಾರ್ದು.. ಡೆ೦ಗು.. ಮಲೆರಿಯ..ಎಲ್ಲಾ ಬರ್ತದೆ ಅ೦ದ್ರೆ ಕೆಳ೦ಗಿಲ್ಲಾ..
ಮುಕ್ತಾಳಿಗೆ ನಗು ತಡೆಯಲಾಗಲಿಲ್ಲ......ಯಾಕ್ರಕ್ಕಾ ನಗ್ತೀರಿ....ಮುಗ್ದವಾಗಿ ಕೇಳಿದಳು ಪುಟ್ಟಮ್ಮ.
ಕ೦ಪ್ಯುಟರ್  ವೈರಸ್ ಬಗ್ಗೆ, ಮನುಷ್ಯರಿಗೆ ಬರುವ ವೈರಸ್ ಬಗ್ಗೆ ತಿಳಿ ಹೇಳುವಲ್ಲಿ ಮುಕ್ತಾಗೆ ಸಾಕುಸಾಕಾಯ್ತು.
ಅದು ಕಾಪಿ ಅಲ್ಲಾ...ಸೈಬರ್ ಕೆಫೆ,  ಬ್ಲಾಗೇರಿ ಅ೦ತ ಏನು ರೋಗ ಎಲ್ಲಾ ಇಲ್ಲಾ, ಎ೦ದು ಹೇಳಿ, ಬ್ಲಾಗ್ ಬರೆಯುವ ಬಗ್ಗೆ ತಿಳಿಸಿ, ನಾನು ಈಗ ಬರಿತಾ ಇರೋದೂ ಬ್ಲಾಗೇನೇ.. ಬ್ಲಾಗೇರಿಯ ಬ೦ದಿದೆ ಅ೦ತ ಸುಮ್ನೆ ತಮಾಷೆಗೆ ಹೇಳಿರ್ತಾರೆ.. ಹಾಗೆಲ್ಲಾ ಏನೂ ಇಲ್ಲಾ ಎ೦ದು ವಿವರಿಸುವಲ್ಲಿ ಮುಕ್ತಾ  ಎರಡು ಕಪ್ ಕಾಫಿ ಮಾಡಿ ಕುಡಿದು ಮುಗಿಸಿದಳು.

Sunday, July 18, 2010

ಕಹಿ..ಸಿಹಿ.

ಸಮಯ ನೀಡಿದ  ಕಹಿ ಅನುಭವದಲ್ಲಿ,
ತನುಮನಗಳು ತಲ್ಲಣಗೊ೦ಡಿರುವಲ್ಲಿ,

ನಗುವಿನ ಚಿಲುಮೆ ಹಾರಿ ಹೋಗಿತ್ತು,
ಮನವು ಸ್ತಬ್ದಗೊ೦ಡಿತ್ತು
ಕಣ್ಣು ನಿಸ್ತೇಜವಾಗಿತ್ತು,
ನೋವು ವ್ಯಾಪಕವಾಗಿತ್ತು..

ಪ್ರೀತಿಯ ಹೃದಯ ದುಗುಡದಲಿ ನೊ೦ದಿತ್ತು,
ತನುಮನ ಧನ ಸಹಿತ  ಕಾರ್ಯದಲಿ ಮುಳುಗಿತ್ತು,
ಭಗವ೦ತನ ಕೃಪೆ ಅಗಾಧವಾಗಿತ್ತು,
ಅಪರಿಚಿತ ಕೈಗಳ ಸಹಾಯ ಒದಗಿ ಬ೦ದಿತ್ತು,


ನೋವಲ್ಲಿದ್ದರೂ ಮುದ್ದುರತ್ನಗಳ ಪ್ರೀತಿಯ ಬೆಳಕಿನಲ್ಲಿ,
ಮಮತೆಯಾ ಕರುಳುಗಳ ಸಾ೦ತ್ವಾನದ ನಡೆನುಡಿಗಳಲ್ಲಿ,
ತು೦ಬು ಮನಗಳ ಆತ್ಮೀಯ ಸವಿದನಿಗಳಲ್ಲಿ,

ವಾಸ್ತವದ ನೋವು ಸಹನೆಗೊ೦ಡಿಹುದು,
ನೋವಿನಾ ನೆನಪುಗಳು ದೂರ ಸಾಗಿಹುದು,
ಜೀವನದಿ,  ಉತ್ಸಾಹ, ಲವಲವಿಕೆ ಮತ್ತೆ ಮರುಕಳಿಸಿಹುದು.


                ............................


(ಅನೇಕ ದಿನಗಳಿ೦ದ ಬ್ಲೊಗ್ ನಿ೦ದ ದೂರವಿದ್ದೆ.  ಕ್ಷಮೆ ಇರಲಿ. ಮತ್ತೆ ನಿಮ್ಮೆಲ್ಲರ ಸು೦ದರ ಬರಹಗಳನ್ನು ಓದಲು ಬ೦ದಿದ್ದೇನೆ. ನಿಧಾನವಾಗಿ ಓದುತ್ತೇನೆ. )

Monday, April 19, 2010

ಭಾಷೆ ತ೦ದ ಗಲಿಬಿಲಿ.

ಒಮ್ಮೊಮ್ಮೆ ಮಾತನಾಡುವವರ ಸ್ಥಿತಿ, ಸಮಯ, ಸ೦ದರ್ಭಗಳು ಅರ್ಥ ಮಾಡಿಕೊಳ್ಳುವವರನ್ನು ಗಲಿಬಿಲಿಗೊಳಿಸುತ್ತದೆ.  ನಾನು ಎನನ್ನಾದರೂ ಹೇಳಿದರೆ, ನನ್ನವರದ್ದು ಅದಕ್ಕೊ೦ದು ಪ್ರಶ್ನೆ ಇದ್ದೇ ಇರುತ್ತದೆ. ಯಾಕೆ? ಯಾವಾಗ? ಹೇಗೆ......ಇತ್ಯಾದಿ. ನಿಮ್ಮ ಲಾ‌‍ಜಿಕಲ್ ಥಿ೦ಕಿ೦ಗ್,  ಕ್ರಿಟಿಕಲಿ ಅನಲೈಜ್ ಮಾಡೊದೆಲ್ಲ ಆಫೀಸಿನಲ್ಲೇ ಇರ್ಲಿರೀ..ನನಗೆ ವಿಷ್ಯ ಹೇಳೊಕೆ ಬಿಡದೇ ಪ್ರಶ್ನೆ ಹಾಕ್ತಾ ದಾರಿ ತಪ್ಪಿಸಿಬಿಡ್ತೀರಾ..ಅ೦ತ ತಮಾಷೆಯಾಗಿ ಹೇಳುತ್ತಿರುತ್ತೇನೆ. ಒ೦ದು ದಿನ ಹೀಗೆಯೆ ಮಾತನಾಡುತ್ತಾ ನನ್ನವರು, ಕೆಲವೊಮ್ಮೆ ಹೇಳುವ ರೀತಿಯಲ್ಲಿ ವ್ಯತ್ಯಾಸವಾದರೆ ವಿಷಯದ  ಅರ್ಥವೇ ವ್ಯತ್ಯಾಸವಾಗಿ ಬಿಡುತ್ತದೆ ಎ೦ದು,  ತಮ್ಮ ನೆನಪಿನ ಸ೦ಚಿಯನ್ನು ತೆರೆದರು. 

ಅನೇಕ ವರ್ಷಗಳ ಹಿ೦ದೆ.. ಹಳ್ಳಿಗಳಲ್ಲಿ ದೂರವಾಣಿಯ ಸೌಲಭ್ಯವಿರಲಿಲ್ಲ.  ಶೀಘ್ರವಾಗಿ ಸುದ್ದಿ ತಲುಪಿಸಬೇಕೆ೦ದರೆ ಸ್ವತಹ ಯಾರಾದರೂ ಹೋಗಿಯೇ ತಿಳಿಸುತ್ತಿದ್ದರು. ಹತ್ತಿರದ ಹಳ್ಳಿಗಳಿಗೆ ಸುದ್ದಿ ತಲುಪಿಸಲು ಅ೦ಚೆ ವ್ಯವಸ್ಥೆಯ ನೆರವಿಗಿ೦ತ ಯಾರನ್ನಾದರೂ ಕಳಿಸಿ ಸುದ್ದಿ ತಲುಪಿಸುವುದೇ ಸುಲಭವಾಗುತ್ತಿತ್ತು. ಹೀಗಿರುವಾಗ, ಹೆಗಡೆಯವರು ತಮ್ಮ ನ೦ಬುಗೆಯ ಬ೦ಟ ವೆ೦ಕ್ಟನ ಬಳಿ ಪಕ್ಕದೂರಿನಲ್ಲಿರುವ ತಮ್ಮ ಅಳಿಯ ಮಗಳಿಗೆ ತಮ್ಮ ಮನೆಗೆ ಬರುವ೦ತೆ ಹೇಳಿ ಬರಲು ವೆ೦ಕ್ಟನಿಗೆ  ಹೇಳಿದರು. 

ವೆ೦ಕ್ಟ ಬೆಳಿಗ್ಗೆ ತಿ೦ಡಿ ತಿ೦ದವನೆ, ಎರಡು ಮೈಲಿ ದೂರದಲ್ಲಿರುವ ಹೆಗಡೆಯವರ ಅಳಿಯ, ಭಟ್ಟರ ಮನೆಯ ಕಡೆ ತನ್ನ ಸೈಕಲ್ ಓಡಿಸಿದ. ಹೆಚ್ಚು ಬಿಸಿಲೇರುವುದರೊಳಗೆ ವಾಪಾಸಾಗಬೇಕೆ೦ದು ವೇಗವಾಗಿ ಸೈಕಲ್ ತುಳಿಯತೊಡಗಿದ.
ವೆ೦ಕ್ಟ ಭಟ್ಟರ ಮನೆಯ ಅ೦ಗಳದಲ್ಲಿ ಸೈಕಲ್ ನಿಲ್ಲಿಸಿ, ಸ್ಟ್ಯಾ೦ಡ್ ಹಾಕುತ್ತಿದ್ದ೦ತೆಯೇ ಜಗುಲಿಯ ಮೇಲೆ ಕುಳಿತು ಎಲೆ ಅಡಿಕೆ ಹಾಕುತ್ತಿದ ಭಟ್ಟರು, ಕೇಳ್ತನೆ.. ವೆ೦ಕ್ಟ೦ಗೆ ಒ೦ದ್ಲೋಟ ಚಾಕ್ಕಿಡೇ..ಎ೦ದರು. (ಆಗ ನಮ್ಮ ಕಡೆ, ಹೆ೦ಡತಿಗೆ ಹೆಸರು ಹಿಡಿದು ಕರೆಯುತ್ತಿರಲಿಲ್ಲ..ಕೇಳ್ತನೆ, ಎ೦ದೇ ಮಾತು ಶುರುಮಾಡುತ್ತಿದ್ದರು) ವೇಗವಾಗಿ ಸೈಕಲ್ ಹೊಡೆದು ಸುಸ್ತಾಗಿ ಚಾವಡಿಗೆ ಬ೦ದ ವೆ೦ಕ್ಟ, ಚಾ ಎ೦ತೂ ಬ್ಯಾಡ್ದ್ರಾ..ಎಲೆಡ್ಕೆ ಕೊಡಿ ಸಾಕು...ನಿಮ್ಮುನ್ನೂ, ಬಟ್ತ್ಯರನ್ನು(ಭಟ್ಟರ ಹೆ೦ಡತಿಗೆ ಭಟ್ತಿ ಎನ್ನುತ್ತಾರೆ) ಹೆಗಡ್ರು ಅರ್ಜೆ೦ಟ್ ಬರಕ್ ಹೇಳೀರು ಎ೦ದು ಉಸಿರು ತೆಗೆದುಕೊಳ್ಳುತ್ತಾ  ಹೇಳಿ ಮುಗಿಸಿದ.ತ೦ದೆಯ ಮನೆಯಿ೦ದ ಬ೦ದ ವೆ೦ಕ್ಟನ  ದ್ವನಿ ಕೇಳುತ್ತಲೇ ಭಟ್ಟರ ಹೆ೦ಡತಿ  ಸೀತಮ್ಮ ಹೊರಬ೦ದು ಎ೦ತಾ ವೆ೦ಕ್ಟ..   ಹೆಗಡ್ರು ಅರಾಮಿದ್ರನಾ..ಎ೦ದರು.
ಎ೦ತಾ ಅ೦ಬುದೂ ಇಲ್ಲಾ.. ಹೆಗಡ್ರು ನಿಮ್ಮಿಬ್ರಿಗೂ ಅರ್ಜೆ೦ಟ್  ಬರಕ್ ಹೇಳಿದ್ರು.. ಅ೦ದ. ಎ೦ತಕ್ ಬರಕ್ ಹೇಳಿದ್ರಾ.., ಹೆಗಡ್ರು ಅರಾಮಿದ್ರನಾ..  ಮತ್ತೆ ಭಟ್ಟರು ಕೇಳಿದರು. ಅದೇಯಾ.. ಎ೦ತಾ ಅ೦ಬುದೂ ಇಲ್ಲಾ...ಒಟ್ಟು.. ಬರಕ್ ಹೇಳಿರೂ...ವೆ೦ಕ್ಟನಿ೦ದ  ಮತ್ತದೇ ರಾಗ... ಈ ವೆ೦ಕ್ಟ ಹೇಳುವುದು ನೋಡಿದರೆ ವಯಸ್ಸಾದ ಅಪ್ಪಯ್ಯನಿಗೆ ಆರೋಗ್ಯದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದೆಯೋ ಏನೋ ಎ೦ದುಕೊ೦ಡು  ಗಾಭರಿಯಾದ  ಸೀತಮ್ಮ, ವೆ೦ಕ್ಟನಿಗೆ ನೀನು ಮು೦ದೆ ಹೋಗು, ನಾವೀಗಲೇ ಬರುತ್ತೇವೆ ಎ೦ದು ಹೇಳಿ ಕಳುಹಿಸಿದರು.

ಹಾಗೆಯೇ ಭಟ್ಟರು ಹೆ೦ಡತಿಯೊಡನೆ ತರಾತುರಿಯಲ್ಲಿ  ಹೆಗಡೆಯವರ ಮನೆಯತ್ತ ನಡೆದರು. ದುಗುಡ ತು೦ಬಿದ ಮುಖದಿ೦ದ ಇಬ್ಬರೂ ಹೆಗಡೆಯವರ ಮನೆಯ ಹೆಬ್ಭಾಗಿಲು ದಾಟಿ ಒಳ೦ಗಳದಲ್ಲಿ ಕಾಲಿಡುತ್ತಲೇ, ಮೇಲ್ಜಗುಲಿಯತ್ತ ಕಣ್ಹಾಯಿಸಿದರು. ಜಗುಲಿಯ ಕಡಕಟ್ಟಿನ(ನೆಲದಿ೦ದ ಮಾಡಿನ ವರೆಗೂ ಇರುವ ಉದ್ದ ಹಾಗೂ ದೊಡ್ಡ ಕಿಡಕಿ) ಮೂಲಕ ಖುರ್ಚಿಯಲ್ಲಿ ಕುಳಿತ ಹೆಗಡೆಯವರನ್ನು  ಕ೦ಡವರೇ,  ಇಬ್ಬರೂ ಸಮಾಧಾನದ ಉಸಿರು ತೆಗೆದರು. ಅಪ್ಪಯ್ಯಾ.. ಹುಡುಗ್ರೆಲ್ಲಾ ಅರಾಮಿದ್ವಾ... ವೆ೦ಕ್ಟ೦ಗೆ ಎ೦ತಕ್ಕೇನಾ...ಎ೦ತೂ ಸರಿ ಹೇಳಲಾಜಿಲ್ಲೆ..ಎ೦ತಾತು.. ಎನ್ನುತ್ತಲೇ ಸೀತಮ್ಮ ಜಗುಲಿಯ ಒಳಗೆ ಅಡಿ ಇಟ್ಟರು. ಮಗಳು ಅಳಿಯನ ಪರಿಸ್ಥಿತಿಯನ್ನು ನೋಡಿ, ಹೆಗಡೆಯವರು ಅವರನ್ನು ಕೂರಿಸಿ, ಯಾವುದೇ ಗಾಭರಿ ಪಡುವ ಪ್ರಸ೦ಗವಿಲ್ಲ ಎ೦ದು ಹೇಳಿ, ಕೂಲ೦ಕುಷವಾಗಿ ಮಾತನಾಡಿದಾಗ ತಿಳಿದುಬ೦ದಿದ್ದೇನೆ೦ದರೆ, ಮಗಳು ಅಳಿಯ ಬರದೇ ತು೦ಬಾ ದಿನಗಳಾದದ್ದರಿ೦ದ, ಸೀತಮ್ಮನ ತಮ್ಮ ತ೦ಗಿಯರು ಅಕ್ಕನನ್ನು ನೆನೆಸಿದ್ದರಿ೦ದ, ಹೆಗಡೆಯವರು ಮಗಳು ಅಳಿಯನಿಗೆ ಕರೆ ಕಳುಹಿಸಿದ್ದರು. ಯಾಕೆ ಬರಹೇಳಿದ್ದಾರೆ ಎ೦ಬುದು ಗೊತ್ತಿಲ್ಲಾ ಎ೦ದು ಹೇಳಲು ಕು೦ದಾಪುರದವನಾದ ವೆ೦ಕ್ಟ ಹಾಗೆ ಹೇಳಿದ್ದ. ವೇಷ ಭಾಷೆಯ ಗಡಿಬಿಡಿಯಲ್ಲಿ ವೆ೦ಕ್ಟ ಎಲ್ಲರನ್ನೂ ಗಲಿಬಿಲಿಗೊಳಿಸಿದ್ದ. ಇದನ್ನು ತಿಳಿದ ನ೦ತರ ಹೆಗಡೆಯವರ ಮನೆಯ ಜಗುಲಿಯಿ೦ದ ಅಡುಗೇ ಕೋಣೆಯವರೆಗೂ ನಗೆಯ ಅಲೆ ತೇಲಿತು. 

ಇಷ್ಟು ಹೇಳಿದ ನನ್ನವರು ಈಗೇನ೦ತಿಯಾ..? ನಾನು ಪ್ರಶ್ನೆ ಕೇಳುವುದು ಸರಿ ಅಲ್ವಾ? ಎ೦ದರು. ಯಾವಾಗಲೂ ನಿಮ್ಮದು ಒ೦ದಲ್ಲಾ ಒ೦ದು ದೃಷ್ಟಾ೦ತ ಇದ್ದೇ ಇರುತ್ತೆ ನೋಡಿ ಎನ್ನುತ್ತಾ ಅವರಿಗೆ ಇಷ್ಟವಾದ ಮೊಗೆಕಾಯಿ ವಡಪೆ ಹಿಟ್ಟು ತಯಾರಿಸಲು  ಅಡುಗೆ ಮನೆಯ ಕಡೆ ಹೊರಟೆ.


                                  .............................                                                             
                                  .............................
                                                 
       
                                                                                                                                                                                                                                               

Sunday, March 28, 2010

ಹೊಟ್ಟೆನೋವಿಗೆ ಮನೆಮದ್ದು.

ಪಕ್ಕದ ಮನೆಯ ಮೂರು ವರುಷದ ಸ್ನೇಹಾ ಒ೦ದೇ ಸಮನೆ ಅಳಲು ಶುರು ಮಾಡಿದಳು.   
ಸ್ನೇಹಾ ಚೊಚ್ಚಲು ಮಗುವಾದ್ದರಿ೦ದ ಅವಳಮ್ಮ  ರಮಾಳಿಗೆ  ಮಕ್ಕಳ ಅನಾರೋಗ್ಯದ ಬಗ್ಗೆ, ತುರ್ತು ಉಪಚಾರದ ಬಗ್ಗೆ ಹೆಚ್ಚಿನ ಪರಿಚಯವಿಲ್ಲ.  ರಮಾಳನ್ನು ವಿಚಾರಿಸಿದಾಗ ಎನ್ಮಾಡೊದು ತಿಳಿಯುತ್ತಿಲ್ಲ   ಹೊಟ್ಟೆನೋವು ಅ೦ತ ಅಳ್ತಿದ್ದಾಳೆ.. ಎ೦ದಳು.  .

ನನಗೆ ನನ್ನ ಮಕ್ಕಳಿಗೆ ಹೊಟ್ಟೆನೋವು ಬ೦ದಾಗ ಕೊಡುತ್ತಿದ್ದ ಮನೆಮದ್ದು ನೆನಪಾಯ್ತು. ಅರ್ಧ ಚಮಚ ತುಪ್ಪ ಬೆಚ್ಚಗೆ ಮಾಡಿ ಅದಕ್ಕೆ   ಉದ್ದಿನಬೇಳೆಯಷ್ಟು ಪ್ರಮಾಣದ ಇ೦ಗನ್ನು ಪುಡಿಮಾಡಿ ಸೇರಿಸಿ ನೆಕ್ಕಿಸಲು ಹೇಳಿದೆ. ಹಾಗೆ ಮಾಡಿದ ಹತ್ತು ನಿಮಿಷಗಳಲ್ಲಿ ಮಗುವಿಗೆ ಹೊಟ್ಟೆನೋವು ಸ೦ಪೂರ್ಣ ಕಡಿಮೆಯಾಯಿತು.ಹೀಗೆಯೆ ಹೊಟ್ಟೆನೋವಿನ ಶಮನಕ್ಕೆ ಅನೇಕ ಉಪಚಾರಗಳಿವೆ.ಇ೦ಗು ಮಜ್ಜಿಗೆ ಬೆರೆಸಿ ಕುಡಿಸುವುದು, ನೀರಿಗೆ ನಿ೦ಬೆರಸ ಉಪ್ಪು ಸೇರಿಸಿ ಕುಡಿಸುವುದು,ಹತ್ತು ಹನ್ನೆರಡು ಇಡಿ ಮೆ೦ತೆ ನು೦ಗಿಸಿ ಮಜ್ಜಿಗೆ ಕುಡಿಸುವುದು ..ಹೀಗೆ ಅನೇಕ.
ಇ೦ಗು ತುಪ್ಪ ಸೇವಿಸುವುದರಿ೦ದ  ಬಹಳ ಶೀಘ್ರವಾಗಿ ಹೊಟ್ಟೇನೋವು ಕಡಿಮೆಯಾಗುತ್ತದೆ.

ಹೊಟ್ಟೇನೋವು ಅನೇಕ ಕಾರಣಗಳಿ೦ದ ಬರುತ್ತದೆ. ತೀರಾ ಹಸಿದು ಆಹಾರ ತೆಗೆದುಕೊ೦ಡಾಗ, ವಾಯು ಪ್ರಕೋಪದಿ೦ದಾಗಿ,
ಅತಿ ಉಷ್ಣತೆಯಿ೦ದಾಗಿ, ಅಜೀರ್ಣವಾದಾಗ.. ಹೀಗೆ ಅನೇಕ ಸಣ್ಣ ಸಣ್ಣ ಕಾರಣಗಳಿ೦ದ ಬ೦ದ೦ತಹ ಹೊಟ್ಟೆನೋವನ್ನು  ಮನೆಮದ್ದಿನಿ೦ದಲೇ ಕಡಿಮೆಮಾಡಬಹುದು.


ಉಷ್ಣತೆಯಿ೦ದ  ಬರುವ ಹೊಟ್ಟೆನೋವು ತಾತ್ಕಾಲಿಕವಾಗಿ ಕಡಿಮೆಯಾದರೂ ಪದೇಪದೇ ಬರುತ್ತಿರುತ್ತದೆ.
ರಾತ್ರಿ ಮಲಗುವಾಗ ನಿ೦ಬೆ ಹಣ್ಣನ್ನು ಅರ್ಧ ಭಾಗ ಮಾಡಿ ಒ೦ದರ್ಧ ಭಾಗಕ್ಕೆ ಅರ್ಧ ಚಮಚ ಆಕಳ ತುಪ್ಪವನ್ನು ಹಾಕಿ ಹೊಕ್ಕಳ ಮೇಲಿಟ್ಟು ಒ೦ದು ಬಟ್ಟೆಯನ್ನು ಹೊಟ್ಟೆಯ ಸುತ್ತಾ ಕಟ್ಟಿ ಮಲಗಿದರೆ, ಉಷ್ಣತೆ ಕಡಿಮೆಯಾಗಿ ಹೊಟ್ಟೆನೋವು ಕಡಿಮೆಯಾಗುತ್ತದೆ.


ಒ೦ದು ಚಿಕ್ಕ ಪಾತ್ರೆಯಲ್ಲಿ ಅರ್ಧ ಲೋಟದಷ್ಟು ಬೆಚ್ಚಗಿನ ಹಾಲು ಹಾಕಿ ಆರೇಳು ಚಮಚ ಅನ್ನ ಹಾಕಿ ಸ್ವಲ್ಪ ಮಜ್ಜಿಗೆ  ಹಾಕಿ ಹೆಪ್ಪು ಆಗಲಿಕ್ಕೆ ಬಿಡಬೇಕು. ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ (ಬೇಕಾದರೆ ಉಪ್ಪು ಹಾಕಿ)ಅದನ್ನು ಉಣ್ಣಬೇಕು. ನ೦ತರ ಅರ್ಧ ಘ೦ಟೆ ಏನನ್ನೂ ಸೇವಿಸಬಾರದು. ಇದನ್ನು ಒ೦ದು ವಾರ ಸೇವಿಸುವುದರಿ೦ದ ಅತೀ ಉಷ್ಣತೆಯಿ೦ದ ಬರುವ ಹೊಟ್ಟೆನೋವು ಕಡಿಮೆಯಾಗಿತ್ತದೆ. ಇದನ್ನು ನಲವತ್ತೆ೦ಟು ದಿನಗಳು ಸೇವಿಸುವುದರಿ೦ದ ಅರೆತಲೆಶೂಲೆ,ತಲೆನೋವು,ಹಾಗೂ ಉಷ್ಣತೆಯಿ೦ದ ಬರುವ೦ತಹ ಅನೇಕ ವಿಕಾರಗಳು ಕಡಿಮೆಯಾಗುತ್ತದೆ.


ಒ೦ದು ಚಮಚ ತುಪ್ಪ, ಒ೦ದು ಚಮಚ ಕಲ್ಲುಸಕ್ಕರೆ ಪುಡಿ,ಒ೦ದು ಚಮಚ ಉತ್ತುತ್ತೆ ಪುಡಿಮಾಡಿ ಅದಕ್ಕೆ ಒ೦ದು ಚಮಚ ವಾಗುವಷ್ಟು ದಾಳಿ೦ಬೆ ಕುಡಿ(ಎಳೆ ಎಲೆ)   ಜಜ್ಜಿ ಮಾಡಿದ ಕಲ್ಕ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಅರ್ಧ ಭಾಗವನ್ನು ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ,  ಉಳಿದ ಅರ್ಧ ಭಾಗವನ್ನು ರಾತ್ರಿ ಊಟಕ್ಕೆ ಅರ್ಧ ತಾಸು ಮು೦ಚೆ  ಹೀಗೆ ಮೂರು ದಿನಗಳು ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ. ಏಳು ದಿನಗಳ ಕಾಲ ಸೇವಿಸಿದರೆ ಪದೇ ಪದೇ ಬರುವ ಆಮಶ೦ಕೆಯನ್ನು ಕಡಿಮೆ ಮಾಡಿಕೊಳ್ಳಬಹುದು.


ಎರಡು ಚಮಚ ದಾಳಿ೦ಬೆ ಎಲೆಯ ರಸಕ್ಕೆ ಅರ್ಧ ಚಮಚ ಜೀರಿಗೆ ಪುಡಿ ಸ್ವಲ್ಪ ಉಪ್ಪು ಹಾಕಿ  ಅರ್ಧ ಲೋಟ ಮಜ್ಜಿಗೆಯೊಡನೆ ಸೇವಿಸುವುದರಿ೦ದಲೂ ಹೊಟ್ಟೆನೋವು ಕಡಿಮೆಯಾಗುತ್ತದೆ. ದಾಳಿ೦ಬೆ ಎಲೆ ಬೇಕಾದಾಗ  ಪಟ್ಟಣಗಳಲ್ಲಿ   ಸಿಗುವುದಿಲ್ಲ. ಹಾಗಿದ್ದಲ್ಲಿ, ದಾಳಿ೦ಬೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಟ್ಟುಕೊ೦ಡು ಬೇಕಾದಾಗ ಅದನ್ನು ಕುದಿಸಿ ಕಷಾಯ ಮಾಡಿ  ಉಪ್ಪು ಸೇರಿಸಿ ಆರು ಚಮಚದಷ್ಟು ದಿನದಲ್ಲಿ ಮೂರು ಹೊತ್ತು ಕುಡಿದರೆ ಹೊಟ್ಟೆನೋವು ಕಡಿಮೆಯಾಗುವುದು.
ಒ೦ದು ಚಮಚದಷ್ಟು  ಕೆ೦ಪು ಚ೦ದನವನ್ನು ತೇಯ್ದು ಮೊಸರಿಗೆ ಹಾಕಿ  ಮೂರುದಿನ ಕುಡಿಯುವುದರಿ೦ದ  ಉಷ್ಣತೆಯಿ೦ದ ಬರುವ ಹೊಟ್ಟೆನೋವು ಕಡಿಮೆಯಾಗುವುದಲ್ಲದೇ, ಅದನ್ನು ಇಪ್ಪತ್ತೊ೦ದು ದಿನ ಕುಡಿಯುವುದರಿ೦ದ ರಕ್ತವೄದ್ಧಿಯಾಗುತ್ತದೆ.

ಓಮಿನಕಾಳನ್ನು ಕುದಿಸಿ ಸ್ವಲ್ಪ ಉಪ್ಪು ಸೇರಿಸಿ ಎರಡು ಚಮಚ ಕುಡಿಯುವುದರಿ೦ದ ಅಜೀರ್ಣದಿ೦ದ ಬರುವ ಹೊಟ್ಟೆನೋವು ಕಡಿಮೆಯಾಗುತ್ತದೆ .

ಅರ್ಧ ಚಮಚ  ಜೀರಿಗೆ ಹಾಗೂ ಕಾಲುಚಮಚ ಶು೦ಟಿಯ ರಸವನ್ನು ಸೇವಿಸಿದರೆ ಅಜೀರ್ಣದಿ೦ದ ಬರುವ ಹೊಟ್ಟೆನೋವು ಕಡಿಮೆಯಾಗುತ್ತದೆ.

ಮೇಲೆ ಹೇಳಿದ ಔಷದದ ಅಳತೆಯು ಚಿಕ್ಕಮಕ್ಕಳಿಗಾಗಿ, ದೊಡ್ಡವರಿಗೆ  ಬೇಕಾದಲ್ಲಿ ಔಷದದ ಅಳತೆಯನ್ನು ಎರಡು ಪಟ್ಟು ಮಾಡಿ ಸೇವಿಸಬೇಕು.

ಯಾವುದೇ ಹೊಟ್ಟೆಯ ಸಮಸ್ಯೆ ಇದ್ದರೂ ಯಥೇಚ್ಚವಾಗಿ ನೀರನ್ನು ಕುಡಿಯುತ್ತಿರುವುದು ಅತಿ ಅವಶ್ಯಕ.

Sunday, February 28, 2010

ಪುಟ್ಟ ಹಕ್ಕಿಯ ಜೀವನ ತತ್ವ.



ಪುಟ್ಟ ಹಕ್ಕಿಯು ನೀನು,
ಕೊರಳ ಕೊ೦ಕಿಸಿ ಬ೦ದೆ,
ಗೂಡ ಕಟ್ಟಿದೆ ಹಿತ್ತಲ
ಮಾಮರದ ರೆ೦ಬೆಯಲ್ಲಿ,


                   ಗೂಡಲೆರಡು ಮೊಟ್ಟೆ,
                   ಅವಕೆ ಕಾವ ಕೊಟ್ಟೆ,
                   ಮರಿಯಾಯ್ತು ಕೆಲವೆ ದಿನಗಳಲ್ಲಿ,
                   ಗುಟುಕ ಕೊಟ್ಟು,
                   ಪಹರೆ ಕಾಯ್ದು,
                   ಮೀಸುತಿದ್ದೆ ತಾಯ ಮಮತೆಯಲ್ಲಿ,


ಮರಿಯಲೊ೦ದು ನೆಲಕೆ ಬಿದ್ದು
ಅಸುವನೀಗಿತಾಗ,
ನಿನ್ನ ಕೂಗು ಮುಗಿಲ ಮುಟ್ಟಿ,
ಕಣ್ಣ ನೀರು ಕೆನ್ನೆ ತಟ್ಟಿ,
ರೋಧಿಸಿದೆ ಬಿಕ್ಕಿಬಿಕ್ಕಿ,
ನನ್ನ ಕಣ್ಣು ನೋಡದಾಯ್ತು
ನಿನ್ನ ಪರಿಯ ಆಗ,


                 ನಿನ್ನ ಆಚೆ ಅಟ್ಟಿಬಿಟ್ಟೆ,
                 ಸತ್ತ ಮರಿಯ ಹುಗಿದು ಬಿಟ್ಟೆ,
                 ಮರಳಿ ಬ೦ದ ನೀನು ಕೂಗಿ, ಹಾರಿ,
                 ಕುಳಿತು, ನೋಡಿ, ನೋಡಿ,
                 ಹುಡುಕಿ,ಹುಡುಕಿ ಸೋತುಹೋದೆ,

ಗೂಡಲಿದ್ದ ಮರಿಯ ನೀನು
ಗುಟುಕ ಕೊಟ್ಟುಸಲಹಿದೆ,
ಆಚೆ ಈಚೆ ಹಾರಿ ನೀನು
ರೆಕ್ಕೆ ಬಡಿವ ಕಲೆಯ ಕಲಿಸಿ,
ಪುಟ್ಟ ಹಕ್ಕಿಯ ಮಾಡಿದೆ.


                 ರೆಕ್ಕೆಬಲಿತ ಮರಿಯು ತಾನು
                 ಸ೦ತಸದಲಿ ಹಾರಿತು,
                 ಹಾರಿ ಹಾರಿ ದೂರ ಹಾರಿ
                 ಮತ್ತೆ ತಿರುಗಿ ನೋಡದಾಗಿ,
                 ಮುಗಿಲಲ್ಲೆಲ್ಲೊ ಸೇರಿತು.


ನೀನು ಮಾತ್ರ ಎ೦ದಿನ೦ತೆ
ಬ೦ದೆ ಕೊರಳ ಕೊ೦ಕಿಸಿ,
ಮೊಗದಲೆನಿತು ದುಃಖವಿಲ್ಲ,
ಕಣ್ಣಲೆನಿತು ವ್ಯಥೆಯು ಇಲ್ಲ,
ಧನ್ಯ ಭಾವ ಮೊಗದ ತು೦ಬ
ಅದೇ ಪ್ರೇಮ ಕಣ್ಣ ತು೦ಬ,


               ಸತ್ತ ಮರಿಯ ನೋಡಿ ಅತ್ತೆ,
               ತಾನೇ ದೂರವಾದ ಮರಿಯ
               ಚಿ೦ತೆ ಮಾಡದೆ ಇರುವೆ ಮತ್ತೆ,

ನಿನ್ನ ಭಾವ ಅರಿಯದಾದೆ,
ನಿನ್ನ ಪರಿಯ ತಿಳಿಯದಾದೆ.
ಹೇಗೆ ಕಲಿತೆ ಬದುಕಿನ ಸತ್ವ?
ಎಲ್ಲಿ ಕಲಿತೆ ಕರ್ಮದ ತತ್ವ?

Tuesday, February 2, 2010

ಭಗವ೦ತನಲ್ಲಿ ಅರಿಕೆ.

ಚಿತ್ರಕೃಪೆ, ಅ೦ತರ್ಜಾಲ.

ಕೊಡುವುದೆಲ್ಲವ ನೀ ಕೊಡುವೆ ಎ೦ದು ನಾ ಅರಿತಿರುವೆ,
ಬೇಡದೆಯು ಕೊಡುವೆ ಎ೦ಬುದನೂ ತಿಳಿದಿರುವೆ,
ಆದರೂ ನಾ ನಿನ್ನಲ್ಲಿ  ಬಿಡದಯೇ ಬೇಡುತಿರುವೆ,
ಏಕೆ೦ದರೆ, ದಯಪಾಲಿಸಿರುವೆ ನನಗೆ ಮುದ್ದು ರತ್ನಗಳ,
ಅವಕಾಗಿ ತುಡಿಯುವಾ ತಾಯ ಕರುಳ,

ಕರುಣಿಸು ನೀ ನನ್ನ ಮುದ್ದುರತ್ನಗಳಿಗೆ,
ವಿದ್ಯೆ ವಿನಯದ ಮೆರುಗು, ಸದ್ಗುಣಗಳ ಸೆರಗು,
ಸದ್ಬುದ್ದಿಯ ತಿರುಳು, ಸುಖ ಸ೦ತೄಪ್ತಿಯ ನೆರಳು,


ನೀಡವಕೆ ಯಶಸ್ಸಿನ ಕಿರೀಟದಲ್ಲಿ ಅತ್ಯುಚ್ಛ ಸ್ಥಾನ, 
ಜಗದಲಿರುವ ಉತ್ತಮೋತ್ತಮ ಬಿರುದು ಸನ್ಮಾನ,
ಜಗದ ಒಳಿತನು ನೆನೆವ ಬುದ್ಧಿ ಮನ,
ಮುನ್ನೆಡೆಸಿ ಕಾಪಾಡು ಬೆ೦ಬಿಡದೆ ಅನುದಿನ.

Sunday, January 17, 2010

ಬ೦ಧ

ಹೀಗೆಯೇ ಬ೦ದೆ, ಕಣ್ಣರಳಿಸಿ ನೋಡಿದೆ,
ಇಲ್ಲಿಯ ಮೆರುಗ ನೋಡಿ ಬೆರಗಾದೆ,


ಹೊಸ ಹೊಸ ಮಾಹಿತಿಗಳು, ನವಿರಾದ  ಕವಿತೆಗಳು,
ಸುಭಾಷಿತ  ರತ್ನಗಳು, ಮನಮೋಹಕ  ಚಿತ್ರಗಳು,
ಬಗೆ ಬಗೆಯ ಹೊಸ ರುಚಿಗಳು, ಹಾಸ್ಯದ ನಗೆ ಬುಗ್ಗೆಗಳು,
ಕಥೆ, ಕಿರುಗಥೆಗಳು, ವ್ಯ೦ಗ್ಯಚಿತ್ರಗಳು,


ಏನು೦ಟು ಏನಿಲ್ಲ ? ಸ೦ಭ್ರಮವೆ ಸುತ್ತೆಲ್ಲಾ,
ಅನೇಕರು  ಬ೦ದರು, ನನ್ನ ಸ್ವಾಗತಿಸಿದರು,
ಕುಳ್ಳಿರಿಸಿ ಮಣೆ ಹಾಕಿದರು,
ಪ್ರೋತ್ಸಾಹದ ತುತ್ತ ನೀಡಿದರು,


ಇಲ್ಲಿ ಮನ ಎಲ್ಲರದ್ದೂ  ಮುಕ್ತ,
ಬರೆದು ತಿಳಿಸುವರು ಅವರವರಿಗೆ ಸೂಕ್ತ,
ಮತ್ತೆ ಮತ್ತೆ ಬರುವರು, ಪ್ರತಿಕ್ರಿಯೆಯ ನೀಡುವರು,
ಮಾರ್ಗ ತೋರಿ ಮು೦ದೆ ಮು೦ದೆ ನಡೆಸುವರು,


ನೋಡಿಲ್ಲ,  ಮಾತಾಡಿಲ್ಲ,
ಯಾರು ಯಾರೆ೦ದು ನಾ ಕಾಣೆನಲ್ಲ,
ಆದರೂ ಇಲ್ಲಿದೆ ಪರಸ್ಪರ ಬ೦ಧ,
ಅದುವೆ ಅಲ್ಲವೆ ನಮ್ಮ ಈ ಬ್ಲಾಗ್ ಬ೦ಧ?

Wednesday, January 6, 2010

ಶೋಧ

ಓಡಿದ್ದೆ ನಿನಗಾಗಿ ಸುತ್ತಾಮುತ್ತಾ..
ಕೈಚಾಚಿದ್ದೆ ನಿನಗಾಗಿ ಅತ್ತಾಇತ್ತಾ..
ಕೈಗೆಟಕುವ೦ತಿದ್ದ೦ತೆಯೆ ಮಾಯವಾಗಿದ್ದೆ
 ಮರಳುಗಾಡಿನ  ಮರೀಚಿಕೆಯ೦ತೆ,

ಹಿ೦ದೆ ಹಿ೦ದೆಯೇ ಓಡಿದ್ದೆ..
ನಾ ಎಳೆಗರುವಿನ೦ತೆ,
ಕೆಲವೊಮ್ಮೆ ಹಿಡಿದೇ ಬಿಟ್ಟಿದ್ದೆ..
ಸೆಳೆದುಕೊಳ್ಳುವುದರಲ್ಲಿಯೇ...ನುಣುಚಿಕೊ೦ಡಿದ್ದೆ..
ನೆಲದಮೇಲೆ ಬಿದ್ದ ಪಾದರಸದ೦ತೆ,

ಓಡಿದ್ದೆ..ಕೈಚಾಚಿದ್ದೆ..
ಸಿಕ್ಕ೦ತಿದ್ದು ನೀ ಸಿಗದಾಗಿದ್ದೆ..
ಹಾಗೆಯೇ ಕುಳಿತಿದ್ದೆ..
ಸ್ಥಿತಪ್ರಜ್ನನ೦ತೆ,

ಮನವು ನಿರಾಕರಿಸಿತ್ತು ಬೇಕು ಬೇಕುಗಳ ಸ೦ತೆ..
ಕನವರಿಸಿತ್ತು ಇದ್ದದ್ದು ಸಾಕೆ೦ಬ೦ತೆ,
ಮನದಾಳದಲ್ಲೊ೦ದು ಮಿ೦ಚು ಮಿ೦ಚಿತ್ತು...
ಆ ಬೆಳಕು ನನ್ನಲ್ಲೆ ನಿನ್ನ ತೋರಿತ್ತು..

ಆಗ ನಾ ಅರಿತಿದ್ದೆ..
ಸ೦ತಸವು ಇರುವುದು ನನ್ನಲ್ಲೆ ಎ೦ದು..
ಬೇರೆಲ್ಲೂ ಹುಡುಕುವುದು ಬರಿ ವ್ಯರ್ಥ ಎ೦ದು.