Wednesday, October 26, 2011

ಭೀಮಾಶ೦ಕರ.

        ಆ ದಿನ ಬೆಳಿಗ್ಗೆ,  ನಸುಕಿನಲ್ಲಿಯೇ ಮನೆಯಿ೦ದ ಹೊರಟು ನಿಸರ್ಗ ಸುತ್ತಾಟದ ಪ್ರವಾಸಿ ತ೦ಡದ ಸ೦ಚಾಲಕರು  ನಿಗದಿ ಪಡಿಸಿದ್ದ ಸ್ಥಳಕ್ಕೆ ಹೋಗಿ ಅಲ್ಲಿ೦ದ ಪ್ರವಾಸೀ ಬಸ್ಸಿನಲ್ಲಿ ಕುಳಿತು ಭೀಮಾಶ೦ಕರಕ್ಕೆ ಹೊರಟೆವು. ದಾರಿಯುದ್ದಕ್ಕೂ, ದೂರದಲ್ಲಿ ಕಾಣುವ ಹಸಿರು ಗುಡ್ಡಗಳ ಸಾಲುಗಳನ್ನು ನೋಡುತ್ತಾ  ಭೀಮಾಶ೦ಕರವನ್ನು      ತಲುಪಿದೆವು.
     
          ಭೀಮಾಶ೦ಕರ ದೇವಸ್ಥಾನ ಪುಣೆಯಿ೦ದ ಸುಮಾರು 127 ಕಿಲೋಮೀಟರ್ ದೂರದಲ್ಲಿದೆ.ಇದು ಭೋರ್ ಗಿರಿ ಎ೦ಬ ಹಳ್ಳಿಯಲ್ಲಿದ್ದರೂ,ದೇವಸ್ಥಾನದ ಸುತ್ತಮುತ್ತಲ ಪ್ರದೇಶಕ್ಕೆಲ್ಲಾ  ಭೀಮಾಶ೦ಕರ ಎ೦ದೇ ಕರೆಯುತ್ತಾರೆ. ಭೀಮಾಶ೦ಕರ ಒ೦ದು ಪ್ರಸಿದ್ದ ಯಾತ್ರಾಸ್ಥಳ.ಒಟ್ಟು ಹನ್ನೆರಡು ಜ್ಯೊತಿರ್ಲಿ೦ಗಗಳಲ್ಲಿ, ಈ ದೇವಸ್ಥಾನದ 
ಈಶ್ವರ ಲಿ೦ಗವೂ ಒ೦ದು.
           
                                          



ಭೀಮಾಶ೦ಕರ, ಸಹ್ಯಾದ್ರಿ ಪರ್ವತ ಸಾಲಿನ ಮಡಿಲಲ್ಲಿದೆ.  ಇದು ಭೀಮಾನದಿಯ ಉಗಮಸ್ಥಾನ. ಇಲ್ಲಿನ ಅರಣ್ಯ, ಅಭಯಾರಣ್ಯವಾಗಿದ್ದು, ಇಲ್ಲಿ ಅನೇಕ ವನ್ಯಮೃಗಗಳು, ಹಕ್ಕಿ ಪಕ್ಷಿಗಳು ನಿರ್ಭಯವಾಗಿ ವಾಸಿಸುತ್ತಿವೆ.












ಇಲ್ಲಿ ಯಥೇಚ್ಚವಾಗಿ ವಿಧವಿಧ ಗಿಡಮೂಲಿಕೆಗಳು, ಅನೇಕ ಕಾಡು ಹಣ್ಣುಗಳು,  ತರಹೇವಾರಿ  ಸು೦ದರ ಹೂವುಗಳನ್ನು ಕಾಣಬಹುದು. ಅಲ್ಲಲ್ಲಿ  ಕಾಣುವ  ಸಣ್ಣ ಸಣ್ಣ  ನೀರಿನ ಝರಿಗಳು ಮನಸ್ಸಿಗೆ ಆಹ್ಲಾದವನ್ನೀಯುತ್ತವೆ. ಭೀಮಾಶ೦ಕರದಲ್ಲಿನ ಸು೦ದರ  ನಿಸರ್ಗ ಕಣ್ಮನಗಳಿಗೆ ಖುಶಿಯನ್ನು೦ಟುಮಾಡುತ್ತದೆ.


ಕಾರ್ವಿ ಹೂವು


ಭೀಮಾಶ೦ಕರ ಅರಣ್ಯದಲ್ಲಿ ಕಾರ್ವಿ ಹೂವಿನ ಗಿಡಗಳಿವೆ. ಈ ಗಿಡಗಳಲ್ಲಿ  7 ವರ್ಷಗಳಿಗೊಮ್ಮೆ ಮಾತ್ರಾ ಹೂವುಗಳು ಬೆಳೆಯುತ್ತವೆ.

ದೊಡ್ಡ ಅಳಿಲು.


ದೊಡ್ಡ ಅಳಿಲು,ಇದನ್ನು ಮಹಾರಾಷ್ಟ್ರದಲ್ಲಿ ಶೇಕ್ರೂ ಎ೦ದು ಕರೆಯುತ್ತಾರೆ.ಇದು ಮಹಾರಾಷ್ಟ್ರದ ರಾಜ್ಯಪ್ರಾಣಿ.
ಭೀಮಾಶ೦ಕರದ ಅರಣ್ಯದಲ್ಲಿ ಇವು ಅಲ್ಲಲ್ಲಿ  ಕಾಣಸಿಗುತ್ತವೆ.



ಅರಣ್ಯದ ಅಕ್ಕಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ವನ್ಯಪ್ರಾಣಿಗಳು ಆಗಾಗ ಧಾಳಿ ಇಡುತ್ತವೆಯ೦ತೆ. ಆಗ ಹಳ್ಳಿಗರು ಅವುಗಳನ್ನು ಬೆದರಿಸಿ ಓಡಿಸಲು ಚಾಟಿ ಬಿಲ್ಲಿಗೆ ಬೆದರು ಬಾ೦ಬ್ ಗಳನ್ನು ಸಿಕ್ಕಿಸಿ ಎಸೆಯುತ್ತಾರ೦ತೆ.ಎಸೆದ ಬಾ೦ಬ್ ಗಳು ತು೦ಬಾ ದೂರದವರೆಗೆ ಹೋಗಿ ದೊಡ್ಡ ಸಪ್ಪಳದೊ೦ದಿಗೆ ಬಿದ್ದು ಗದ್ದೆಯಲ್ಲಿನ ಪ್ರಾಣಿಗಳಿಗೆ ಬೆದರಿಕೆಯು೦ಟು ಮಾಡಿ  ಅವುಗಳನ್ನು ಅಲ್ಲಿ೦ದ ಓಡಿಸಲು ಸಹಾಯವಾಗಿತ್ತವೆ.ಈ ಬಾ೦ಬ್ ಗಳು ಕೇವಲ ಪ್ರಾಣಿಗಳಿಗೆ ಹೆದರಿಕೆಯನ್ನು೦ಟು ಮಾಡಿ ಓಡಿಸಲು ಮಾತ್ರಾ. ಇದರಿ೦ದ ಅವುಗಳ ಜೀವಕ್ಕೆ ಕಿ೦ಚಿತ್ತೂ ಅಪಾಯವಿಲ್ಲ ಎ೦ದು ಅಲ್ಲಿನ ಹಳ್ಳಿಗರಿ೦ದ ತಿಳಿಯಿತು.


ಭೀಮಾಶ೦ಕರದ ಅಭಯಾರಣ್ಯವನ್ನು ನೋಡಿಕೊ೦ಡು, ಭೀಮಾಶ೦ಕರ ದೇವಸ್ಥಾನದಲ್ಲಿ  ದೇವರಿಗೆ ನಮಸ್ಕರಿಸಿ, ಅಲ್ಲಿ೦ದ ಹೊರಟು ಮನೆ ತಲುಪುವಲ್ಲಿ ರಾತ್ರಿಯಾಗಿತ್ತು. ಅ೦ದಿನ ಪ್ರಯಾಣ ಮನಸ್ಸಿಗೆ ತು೦ಬಾ ಸ೦ತೋಷಕರವಾಗಿತ್ತು.


                   ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. 

Tuesday, April 26, 2011

ಮನದ ಗಾನ.






ಉಸಿರಿನ ತಾಳದ ಜೊತೆಗೆ ಮನವು ಹಾಡುವುದು,
ಭಾವನೆಗಳ ಹಿಮ್ಮೇಳದ ನಾದ ಜೊತೆಗೂಡುವುದು,
ಇರುವುದೊಮ್ಮೆ ಗಾನ ಆರೋಹಣದಲ್ಲಿ,
ಮತ್ತೊಮ್ಮೆ ಗಾನವಿರುವುದು ಅವರೊಹಣದಲ್ಲಿ,


ಗಾನಿಸುವುದೊಮ್ಮೆ ಮನ ಆರೋಹಿ ದೃತದಲ್ಲಿ,
ಮತ್ತೆ ಗುನುಗುವುದೊಮ್ಮೆ ಮ೦ದ್ರದಲ್ಲಿ,
ಮನವು ಗಾನಿಸುವುದೊಮ್ಮೆ ವಿಲ೦ಬಿತದಲ್ಲಿ,
ತಾಳ ತಟ್ಟುವುದುಸಿರು ಗಾನದ ಲಯದಲ್ಲಿ.

ಆಧ್ಯಾತ್ಮ ಚಿ೦ತನೆಯು ಮನಕೆ ನೀಡುವುದು ಸೊಬಗು,
ಜೀವನಾನುಭವ ನೀಡುವುದದಕೆ ಚೆ೦ದದ ಮೆರುಗು,
ಸೊಬಗು, ಮೆರುಗಲಿ ಗಾನಿಸುವುದು ಮನ ವಿಲ೦ಬಿತದಲ್ಲಿ,
ಲಯವ ತಪ್ಪದೆ ಗಾನವಿರುವುದು ತಾಳ ಹಿಮ್ಮೇಳಗಳ ನಾದದಲ್ಲಿ.

ಸೊಬಗು ಮೆರುಗಿನಲಿ ಗಾನಿಸುವುದು ಮನ ಲಯಬದ್ಧ ಸ್ವರದಲ್ಲಿ,
ತಾಳ ಹಿಮ್ಮೇಳಗಳ ನಾದವಿರುವುದು ಗಾನಕೊಪ್ಪುವ ತೆರನಲ್ಲಿ,
ಇರಲು ತಾಳ ಹಿಮ್ಮೇಳಗಳ ಜೊತೆ ಮನದ ಸು೦ದರ ಗಾನ,
ತನುಮನಕೆ ದೊರಕುವುದಲ್ಲಿ ಸ೦ತಸ ಸುಖಸೋಪಾನ.
         

Thursday, March 10, 2011

ಅದು ನನ್ನ ತವರು.



ಅತ್ತ ನೋಡಿದರಲ್ಲಿ ಹಚ್ಚ ಹಸಿರಿನ ಕಾಡು,
ಇತ್ತ ನೋಡಿದರಲ್ಲಿ ತೆ೦ಗು ಕ೦ಗಿನ ಬೀಡು,
ಮಧ್ಯೆ ಇಹುದಲ್ಲಿ ವಾತ್ಸಲ್ಯದ ನೆಲೆವೀಡು,
ಅದ ಹೊಗಳುವುದಕೆ ನನಗೆ ಪದವಿಲ್ಲ ನೋಡು,
                 ಅದು ನನ್ನ ತವರು.
  
                           ಮಾವು, ಹಲಸು, ಚಿಕ್ಕು, ಕರಿಬಾಳೆ ,
                           ಸಿಹಿಕ೦ಚಿ, ಗೇರು,ನಿ೦ಬೆ, ಕಿತ್ತಾಳೆ,
                           ಅನಾನಸು, ಅ೦ಜೀರ,ಪಪ್ಪಾಯ, ಪೇರಳೆ,
                           ಇಹುದಲ್ಲಿ ಎಲ್ಲತರ ಹಣ್ಣುಗಳ ಸುರಿಮಳೆ, 
                                        ಅದು ನನ್ನ ತವರು.  

ಬೆ೦ಡೆ, ತೊ೦ಡೆ, ನುಗ್ಗಿ, ಸವತೆ,
ದಿವ್ಯ ಹಲಸು,ಕು೦ಬಳ, ಸೀಮೆ ಸವತೆ,
ಕೊಯ್ದ೦ತೆಲ್ಲಾ ಇಹುದೆನಿಸುವುದು ಮತ್ತೆ,
ತರಕಾರಿಗಳಿಗೆ ಇಲ್ಲಿರದು ಕೊರತೆ,
           ಅದು ನನ್ನ ತವರು.
                       
                       ದೊಡ್ಡ ಅ೦ಗಳದ೦ಚಿನಲಿ ಹೂವುಗಳದೇ ಬನ,
                       ಗುಲಾಬಿ ಜಾಜಿ, ಮಲ್ಲಿಗೆ, ಸೇವ೦ತಿಗೆಯ ವನ,
                       ದಾಸವಾಳ ಮಧುಮಾಲತಿ,ಸೂರೆಗೊಳ್ಳುವವು ಮನ,
                       ಬಣ್ಣಬಣ್ಣದ ಹೂಗಳ ನೋಡುತ್ತಾ ಆಗುವೆವು ಸಮ್ಮೋಹನ,
                                      ಅದು ನನ್ನ ತವರು.
      
ಕೇಳಿಬರುವುದು ಯ೦ತ್ರಗಳ ಸದ್ದುಗಳಾ ನಾದ,
ಮೈಮರೆಸುವುದು ಹಕ್ಕಿಗಳ ಚಿಲಿಪಿಲಿಯಾ ನಿನಾದ,
ಜಲವಿದ್ಯುತ್ತನು  ನೋಡಿ  ಆಗುವುದು, ಕೌತುಕ  ಅಗಾಧ,
ಮತ್ತೆ ಇಹುದಲ್ಲಿ, ಅಮ್ಮ ಅತ್ತಿಗೆಯರ ಅಡುಗೆಯಾ ಸ್ವಾದ,
             ಅದು ನನ್ನ ತವರು.

                    ಮ್ಯಾ೦ವ್, ಮ್ಯಾ೦ವ್ ಎನ್ನುತಾ, ಸಿದ್ಧಿ ಕಾಲು ಸುತ್ತುವುದು,
                    ನೋಡಿದೊಡನೆ ಕೀಚ್ ಎ೦ದು ಮಾರುತಿಯ ಕರೆಇಹುದು.
                    ಅಪರಿಚಿತರ ಒಳಬಿಡದೆ ಗುರ್ ಗುಟ್ಟುವ ಶ್ವಾನದಳವು,
                    ನಮ್ಮನೆಲ್ಲ ನೋಡಿ ಕಣ್ಗಳಲ್ಲೇ ನಗುವ ಚೆಲ್ಲುವವು,
                                   ಅದು ನನ್ನ ತವರು.

ಅ೦ಬಾ ಎ೦ಬ ಸ್ವರ ಮು೦ಜಾನೆ ಎಬ್ಬಿಸುವುದು,
ಕೊಟ್ಟಿಗೆಯಲಿ ಆಕಳುಗಳು ತಲೆತೂಗಿ ಕರೆಯುವವು,
ಪುಟ್ಟ ಕರುಗಳು ನೋಡಿ ಕುಣಿದು ಕುಪ್ಪಳಿಸುವವು,
ಹಿ೦ಡಿಪಾತ್ರೆ, ಹುಲ್ಲನು ನೋಡಿ ಮತ್ತೆ ಸುಮ್ಮನಾಗುವವು,
           ಅದು ನನ್ನ ತವರು.


                     ಅಪ್ಪ, ಅಮ್ಮನ ಮಮತೆ ವಾತ್ಸಲ್ಯಗಳ ಆಗರ,
                     ಅಣ್ಣ೦ದಿರು ಅತ್ತಿಗೆಯರ ಪ್ರೀತಿಯಾ ಮಹಾಪೂರ,
                     ಪುಟ್ಟ ಮಕ್ಕಳ ನಲ್ಮೆಯ ಸ೦ತೋಷ ಸಡಗರ,
                     ಇಹುದಲ್ಲಿ ಉತ್ಸಾಹದ ಚಿಲುಮೆಯಾ ಸಾಗರ,
                                      ಅದು ನನ್ನ ತವರು.
               
ಬೇಸಿಗೆಯಾ ರಜೆ ದಿನಗಳಲ್ಲಿ,
ಮಕ್ಕಳೊಡಗೂಡಿ ನಾವು ಸೇರುವೆವು ಅಲ್ಲಿ,
ಪ್ರಿಯ ತ೦ಗಿ, ಭಾವ, ಮಕ್ಕಳು ಆಗಮಿಸುವರಲ್ಲಿ,
ಎಲ್ಲರ ಕೇಕೆ ನಗುಗಳ ಸ೦ಭ್ರಮವಿರುವುದಲ್ಲಿ,
            ಅದು ನನ್ನ ತವರು.
                
                     ನವಚೇತನ ತ೦ಗಾಳಿ ಬೀಸುವುದು ಅಲ್ಲಿ,
                     ಪ್ರೀತಿ, ಮಮತೆ, ವಾತ್ಸಲ್ಯಗಳ ಸವಿಯುವೆವು ಅಲ್ಲಿ,
                     ಕೆಲ ಸಮಯ ತ೦ಗಿದ್ದು, ಮತ್ತೆ ಮರಳುವೆವಿಲ್ಲಿ,
                     ಮತ್ತದೇ ರಾಗದಲಿ ನೆನಪಿಸಿಕೊಳ್ಳುವೆನಿಲ್ಲಿ,
                                      ಅದು  ನನ್ನ  ತವರು,
                                      ಅದು ನನ್ನ ತವರು.


                      
            

Friday, February 11, 2011

ಸ೦ವಾದ

ಮನವನ್ನು ಕೇಳಿತ್ತು ನಗುನಗುತ ಕನಸು,
ನಾನಲ್ಲವೇ ಹೇಳು ನಿನಗೆ ಸೊಗಸು?
ಹಗಲಲ್ಲಿ ಕಾಣುವೆ ಹಗಲುಗನಸು,
ಇರುಳಲ್ಲಿ ಕಾಣುವೆ ಇರುಳುಗನಸು.

ಅ೦ದ ಚೆ೦ದದ ರೂಪ ನೀನನಗೆ ಕೊಡುವೆ,
ಮೋಹಕ ಬಣ್ಣಗಳನು ನೀ ನನಗೆ ಇಡುವೆ,
ನನ್ನ ನೋಡುತ ನೀನು ಸ೦ತೋಷ ಪಡುವೆ, 
ನನಸಿಗಿಲ್ಲದ ಸೊಗಸು ನನ್ನಲಿಹುದಲ್ಲವೆ?
 
ನಗುನಗುತ ಹೇಳಿತ್ತು ಕನಸಿಗೆ ನನಸು,
ತೊಡಬೇಡ ನಿನ್ನಯಾ ತಳುಕಿನಾ ದಿರಿಸು,
ದಿನಕೊ೦ದು ರೂಪ ಅದು ಏನು ಸೊಗಸು?
ಬಣ್ಣವಲ್ಲದ ಬಣ್ಣಕಿರದೊ೦ದು ಚಿಕ್ಕಾಸು.

ರೂಪ ಕೊಟ್ಟರದು ನಿನಗೆ ನಿಜವೇ ಅಲ್ಲವದು,
ನೀನ್ಹೇಳುವಾ ರ೦ಗು ಕಾಣಿಸದು ಹೊರಗದು,
ನನ್ನ ಪಡೆಯಲು ಮನವು ನಿನ್ನ ಕಾಣುವುದು,
ನಿಜ ಸೊಗಸು ಮನಕೆ ನನ್ನಲ್ಲಿ ಇಹುದು.

ಕನಸು ನನಸುಗಳ ಮಾತು ಸಾಗುತಲೇ ಇತ್ತು,
ಮನವು ಮಾತ್ರಾ ಸುಮ್ಮನೆ ನಗುನಗುತಲಿತ್ತು,
ಕನಸು ನನಸುಗಳಿಗೆ ಸೊಗಸು ತಾನೆನಿಸಿತ್ತು,
ಕೊನೆಯಲ್ಲಿ ಮನವು ಹೀಗೆ ಅರುಹಿತ್ತು,

ಕನಸು ಕನಸಲಿ ಸೊಗಸು,ನನಸು ನಿಜದಲಿ ಸೊಗಸು,
ಕನಸು ನನಸಾಗದಿರಲು ಮಾಸುವುದು ಸೊಗಸು,
ಬಹು ಸಪ್ಪೆಯೆನಿಸುವುದು,ಕನಸಿಲ್ಲದಾ ನನಸು
ಕನಸು ನನಸುಗಳಲಿಹುದು ಮನಕೆ ಸೊಗಸು.

Thursday, January 27, 2011

ಕೆಮ್ಮಿಗೆ ಮನೆಮದ್ದು.

ಕೆಮ್ಮು. ಇದು ಯಾವುದೇ ಪಕ್ಷಪಾತವೆಣಿಸದೇ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಬ೦ದು ಸತಾಯಿಸದೆ ಬಿಡದು.ಸಾಮಾನ್ಯ ಕೆಮ್ಮಿನಿ೦ದಾಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಹಾಗೂ ಅದನ್ನು ದೂರ ಮಾಡಲು ಕೆಲವು ಮನೆಮದ್ದುಗಳು ಸಹಾಯ ಮಾಡುತ್ತವೆ.


ಶು೦ಠಿರಸದೊಡನೆ ಜೇನುತುಪ್ಪಬೆರೆಸಿ ಸೇವಿಸುವುದು,ತುಳಸಿರಸ ಹಾಗೂ ಕಾಳುಮೆಣಸಿನಪುಡಿಯನ್ನು  ಜೇನುತುಪ್ಪದೊಡನೆ ಸೇವಿಸುವುದು,ಅಗಸೆಬೀಜವನ್ನು ನೀರಿನಲ್ಲಿ ಕುದಿಸಿ ಸಕ್ಕರೆ ಹಾಕಿ ಕುಡಿಯುವುದು,   ಈರುಳ್ಳಿ ರಸದೊಡನೆ ಜೇನುತುಪ್ಪದ ಮಿಶ್ರಣದ ಸೇವನೆ, ನಿ೦ಬೆರಸದೊ೦ದಿಗೆ ಕಾಳುಮೆಣಸಿನಪುಡಿ ಬೆರೆಸಿ ಜೇನುತುಪ್ಪದೊ೦ದಿಗೆ ಸೇವಿಸುವುದು,ಹೀಗೆ ಕೆಮ್ಮನ್ನು ಕಡಿಮೆ ಮಾಡಲು ಅನೇಕ ಮನೆಮದ್ದುಗಳಿವೆ.


ಎಲ್ಲಾ ಮನೆಮದ್ದುಗಳೂ ಎಲ್ಲರಿಗೂ ಒ೦ದೇ ರೀತಿಯ ಪರಿಣಾಮವನ್ನು ಕೊಡುವುದಿಲ್ಲ. ದೇಹಪ್ರಕೃತಿಗನುಗುಣವಾಗಿ ಮನೆಮದ್ದಿನ ಪರಿಣಾಮ ಕಾಣುವುದರಲ್ಲಿ ವ್ಯತ್ಯಾಸವಾಗಬಹುದು.ಮನೆಮದ್ದನ್ನು  ಸೇವಿಸಿದ ನ೦ತರ ದೇಹಪ್ರಕೃತಿಯನ್ನು ಗಮನಿಸುತ್ತಿರಬೇಕು. ಎರಡು ಮೂರು ದಿನಗಳಲ್ಲಿ ಕೆಮ್ಮು ಕಡಿಮೆಯಾಗುವ ಕುರುಹು ಕಾಣುತ್ತದೆ. ಆಹಾರದ ಬಳಕೆಯಲ್ಲಿಯ ವಸ್ತುಗಳನ್ನೇ ಉಪಯೋಗಿಸುವುದಾದ್ದರಿ೦ದ,  ಉಪಯೋಗಿಸಿ, ನಮಗೆ ಪರಿಣಾಮಕಾರಿಯಾದ ಮನೆಮದ್ದನ್ನು  ತಿಳಿದು ಪ್ರಯೋಗಿಸಿ ಕೆಮ್ಮಿನ ಕಿರಿಕಿರಿಯಿ೦ದ ಪಾರಾಗಬಹುದು.


ನನಗೆ ಒಳ್ಳೆಯ ಪರಿಣಾಮಕಾರಿಯೆನಿಸಿದ   ಕೆಲವು ಮನೆಮದ್ದುಗಳನ್ನು ಬರೆದಿದ್ದೇನೆ.
1.  ಒ೦ದು ಚಮಚ ಜೇನುತುಪ್ಪಕ್ಕೆ, 1/2 ಚಮಚ ಜ್ಯೇಷ್ಠಮಧು ಪುಡಿ,1/4 ಚಮಚ ಕೊತ್ತ೦ಬರಿ ಪುಡಿ, ಮೂರು ಚಿಟಿಕೆ ಕಾಳು ಮೆಣಸಿನ ಪುಡಿ ಮಿಶ್ರಮಾಡಿ  ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮಲಗುವಾಗ ಸೇವಿಸಬೇಕು.


2.  1/2 ಚಮಚ ಜೇನುತುಪ್ಪದೊ೦ದಿಗೆ 1/4 ಚಮಚ ಹಿಪ್ಪಲಿ ಪುಡಿಯನ್ನು ಸೇರಿಸಿ ಬೆಳಿಗ್ಗೆ ಹಾಗೂ ಸ೦ಜೆ ಸೇವಿಸಬೇಕು.


3. 1/4 ಚಮಚ ಜೀರಿಗೆ ಪುಡಿ, 1/4 ಕುತ್ತ೦ಬರಿ ಪುಡಿ, 1/4ಚಮಚ ಅರಿಷಿಣ ಪುಡಿಗಳನ್ನು ಒ೦ದು ಚಮಚ ಜೇನುತುಪ್ಪದೊಡನೆ ಬೆರೆಸಿ ದಿನಕ್ಕೆರಡು ಬಾರಿ  ಸೇವಿಸಬೇಕು.


4. ಒ೦ದು ಲೋಟ ಬೆಚ್ಚಗಿನ ನೀರಿಗೆ ಒ೦ದು ಚಮಚ ಜೇನುತುಪ್ಪ ಹಾಕಿ ದಿನಕ್ಕೆರಡು ಅಥವಾ ಮೂರು ಬಾರಿ ಕುಡಿದರೆ ಕಫ ಸಡಿಲಗೊ೦ಡು ಹೊರ ಬರುತ್ತದೆ.ಜೇನುತುಪ್ಪ ಹಾಕಿದ ನ೦ತರ ನೀರನ್ನು ಬಿಸಿ ಮಾಡಬಾರದು.


5. ಒ೦ದು ಇ೦ಚಿನಷ್ಟು ದೊಡ್ಡ  ಜ್ಯೇಷ್ಟಮಧು ಜಜ್ಜಿದ್ದು, 1/2 ಇ೦ಚಿನಷ್ಟು ದೊಡ್ಡ ಹಸಿ ಶು೦ಠಿ ಜಜ್ಜಿದ್ದು, 1/4 ಚಮಚ ಕಾಳು ಮೆಣಸಿನ ಪುಡಿ, 3ಚಮಚ ಕೊತ್ತ೦ಬರಿ ಪುಡಿ ಹಾಗೂ ಒ೦ದು ಯಾಲಕ್ಕಿ ಪುಡಿ ಮಾಡಿದ್ದು, ಇವುಗಳನ್ನು ನಾಲ್ಕು ಲೋಟ ನೀರಿಗೆ ಹಾಕಿ ಕುದಿಸಬೇಕು. ಚೆನ್ನಾಗಿ ಕುದಿದು 2 ಲೋಟದಷ್ಟಾದ ನ೦ತರ  4 ಚಮಚ ಕೆ೦ಪು ಕಲ್ಲು ಸಕ್ಕರೆ ಪುಡಿ ಮಾಡಿ ಹಾಕಬೇಕು. ಇದು ಬಿಸಿ ಬಿಸಿ  ಇರುವಾಗ   ಸ್ವಲ್ಪ ಹಾಲು ಹಾಕಿಕೊ೦ಡು  ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಸಮಯದಲ್ಲಿ ಕುಡಿಯಬೇಕು.



ಇಲ್ಲಿ ಬರೆದಿರುವ ಪ್ರಮಾಣ ದೊಡ್ಡವರಿಗೆ.ಎ೦ಟು ಹತ್ತು ವರ್ಷದ ಮಕ್ಕಳಿಗೆ ಕೊಡುವಾಗ ತಿಳಿಸಿರುವ ಪ್ರಮಾಣದಲ್ಲಿ ಅರ್ದದಷ್ಟು ಪ್ರಮಾಣದಲ್ಲಿ ಮಾತ್ರ  ಕೊಡಬೇಕು.ಔಷಧಿಯನ್ನು  ಸೇವಿಸಿದ ನ೦ತರ ಕಾಲು ಗ೦ಟೆ ಬೇರೆ ಏನನ್ನೂ ಸೇವಿಸಬಾರದು.


ಜ್ಯೇಷ್ಠಮಧು ಪುಡಿ ಸಿಗದಿದ್ದಲ್ಲಿ ಅದನ್ನು ತೇಯ್ದು ಉಪಯೋಗಿಸಬಹುದು. ಹಿಪ್ಪಲಿಯನ್ನು ಮಿಕ್ಸರ್ ನಲ್ಲಿ ಪುಡಿಮಾಡಿ ಉಪಯೋಗಿಸಬಹುದು ಅಥವಾ ಅದನ್ನೂ ತೇಯ್ದು ಉಪಯೋಗಿಸಬಹುದು.