Thursday, December 31, 2009

ನಗು


ಸಮಯದ ಚಕ್ರ ಉರುಳುತ್ತಿದೆ... ಅನೇಕ ಸಿಹಿ ಕಹಿ ಅನುಭವಗಳನ್ನು ಕೊಡುತ್ತಾ ಅದರ ಗತಿಯಲ್ಲಿ ಅದು ಕ್ರಮಿಸುತ್ತಲೇ ಇದೆ. ಕಳೆದ೦ತಹ  ಸಮಯ, ಕೊನೆಯಲ್ಲಿ  ಕನ್ನಡ ನಾಡಿಗೆ  ಕಹಿ ಎನಿಸಿದರೂ, ನಮ್ಮನ್ನಗಲಿದ ಕಣ್ಮಣಿಗಳಿಗೆ ನಮನವನ್ನು ಅರ್ಪಿಸುತ್ತಾ, ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತಾ  ಬರುತ್ತಿರುವ  ವರುಷ  ಎಲ್ಲರಿಗೂ ಶುಭದಾಯಕವಾಗಲಿ  ಎ೦ದು   ನಗುನಗುತ್ತಾ   ವರ್ಷದ  ಆರ೦ಭ ಮಾಡೋಣ.

ಸಾಮಾನ್ಯವಾಗಿ ನಗುವ ಸಮಯದಲ್ಲಿ ನಗು ಬರುತ್ತದೆ..   ನಗುತ್ತೇವೆ.... ನಗುವಿನ ಬಗ್ಗೆ, ಅದರ ಪ್ರಾಮುಖ್ಯತೆಯ ಬಗ್ಗೆ ಆಲೋಚನೆ ಮಾಡಿರುವುದಿಲ್ಲ..ನಗುವಿನ ಬಗ್ಗೆ ನನಗೆ ತಿಳಿದಿದ್ದನ್ನು ಬರೆದಿದ್ದೇನೆ. 




        ಒ೦ದು ಭಾನುವಾರ ಬೆಳಿಗ್ಗೆ.  ಹೊರಗೆ ನೋಡುತ್ತಾ ನಿ೦ತಿದ್ದೆ. ದೂರದಲ್ಲೆಲ್ಲೋ ಜೋರಾಗಿ ನಗುತ್ತಿದ್ದಾರೆ ಎನ್ನಿಸಿತು. ಸರಿ ಈ ಹೊತ್ತಿನಲ್ಲಿ ಎನಿರಬಹುದು ಎ೦ದುಕೊ೦ಡು  ಮನೆಯಿ೦ದ  ಹೊರಬಿದ್ದೆ. ಸ್ವಲ್ಪವೆ ದೂರದಲ್ಲಿ  ನಗೆಕೂಟ  ನಡೆಯುತ್ತಿತ್ತು.  ಹತ್ತು   ಹನ್ನೆರಡು ಜನ    ವಯಸ್ಕರು  ಚಪ್ಪಾಳೆ ತಟ್ಟುತ್ತಾ  ಜೋರಾಗಿ ನಗುತ್ತಿದ್ದರು. ಆಗ ನನಗೆ ನಗುವಿನ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಉ೦ಟಾಯಿತು.  ನ೦ತರದಲ್ಲಿ ಅನೇಕ ಸ೦ಗತಿಗಳು  ಗಮನಕ್ಕೆ ಬರತೊಡಗಿದವು.  


ನಗುವುದರಿ೦ದ ನಮ್ಮ ಶರೀರಕ್ಕೆ ಅನೇಕ ರೀತಿಯ ವ್ಯಾಯಮ ದೊರಕುತ್ತದೆ. ಇಡಿ ಶರೀರಕ್ಕೆ ಚಲನೆ ಸಿಗುತ್ತದೆ.  ಮುಖ, ಗ೦ಟಲು, ಹೊಟ್ಟೆ, ಹಾಗೂ ಜೀರ್ಣ ಸ೦ಬ೦ಧೀ ಅ೦ಗಗಳಿಗೆ ಮರ್ಧನ( massage) ಮಾಡಿದ೦ತೆ ಆಗುತ್ತದೆ .  ಶ್ವಾಸಕಾ೦ಗಗಳಿಗೆ  ಲಘು ವ್ಯಾಯಾಮ  ದೊರೆತು  ಉಸಿರಾಟದ ಕ್ರಿಯೆ    ಸುಸ್ಥಿತಿಯಲ್ಲಿ   ನಡೆಯುತ್ತದೆ.  ಚಪ್ಪಾಳೆ ತಟ್ಟುವುದರಿ೦ದ  ಭುಜ ಹಾಗೂ ಕೈಗಳಿಗೆ ವ್ಯಾಯಾಮ  ಸಿಗುತ್ತದೆ. ಅ೦ಗೈಯಲ್ಲಿರುವ ಶಕ್ತಿ ಕೇ೦ದ್ರ ಬಿ೦ದುಗಳು ಕ್ರಮಬದ್ಧವಾಗಿ ಅದುಮಲ್ಪಟ್ಟು ಪೂರ್ಣ ಶರೀರದ ಸಾಮಾನ್ಯ ಕ್ಲೇಶಗಳು ದೂರವಾಗುತ್ತವೆ.
ಕುತ್ತಿಗೆ ಹಾಗೂ  ಬೆನ್ನಿನ ಸ್ನಾಯುಗಳು ಹಾಗೂ ನರಗಳು ಸಡಿಲಗೊ೦ಡು ಅನೇಕ ತತ್ಸ೦ಭ೦ದೀ ಖಾಯಿಲೆಗಳನ್ನು ದೂರವಿರಿಸುತ್ತದೆ.  ತೀರವಯಸ್ಕರು ಅಥವಾ ಯಾವುದಾದರೂ ಖಾಯಿಲೆಯಿ೦ದ ಬಳಲುತ್ತಿದ್ದಲ್ಲಿ ನಗೆಕೂಟದಲ್ಲಿ ಭಾಗವಹಿಸುವ ಮುನ್ನ ತಜ್ನ ವೈದ್ಯರ ನೆರವು ತೆಗೆದುಕೊಳ್ಳುವುದು ಉತ್ತಮ. ಅನೇಕ ಕಡೆ ನಗೆ ಚಿಕಿತ್ಸೆಗಳನ್ನು ಕೂಡ ನಡೆಸಲಾಗುತ್ತದೆ ಎ೦ದು ಕೇಳಿದ್ದೇನೆ. ನಗೆ ಚಿಕಿತ್ಸೆಯಿ೦ದ  ಅಧಿಕ ರಕ್ತದೊತ್ತಡ, ತಲೆನೋವು, ನರ ಹಾಗೂ ನೋವಿನ ಖಾಯಿಲೆಗಳು, ನೆನಪಿನ ಶಕ್ತಿ  ಕ್ಷೀಣತೆ,  ಖಿನ್ನತೆ, ಮು೦ತಾದ ಅನೇಕ  ಮಾನಸಿಕ ಹಾಗೂ  ಮನೋದೈಹಿಕ ಖಾಯಿಲೆಗಳ ಗುಣ ಸಾಧ್ಯ. ಮೆದುಳಿನ ಹಿ೦ಭಾಗದಲ್ಲಿ ಸ೦ತೋಷದ ಕೇ೦ದ್ರ ಬಿ೦ದು ಇರುತ್ತದೆ.  ಅದಕ್ಕೆ ಕಾರ್ಟೆಕ್ಸ್ ಎನ್ನುತ್ತಾರೆ. ನಗುವುದರಿ೦ದ ಕಾರ್ಟೆಕ್ಸನ  ಪ್ರದೇಶದಲ್ಲಿ ಚಲನೆಯು೦ಟಾದಾಗ ಸ೦ತೋಷ  ಹೆಚ್ಚುತ್ತದೆ.  ನಗುವುದರಿ೦ದ ಒತ್ತಡದ ಹಾರ್ಮೋನುಗಳು ಕಡಿಮೆಯಾಗಿ ಸ೦ತೋಷದ ಹಾರ್ಮೋನುಗಳು ಸ್ರವಿಸುತ್ತವೆ   ಎ೦ಬುದು ತಜ್ನರ ಅಭಿಪ್ರಾಯ.
     
         ನಗೆಕೂಟ, ನಗೆಚಿಕಿತ್ಸೆ ಇವೆಲ್ಲ ಸರಿನೆ,  ನಿಗದಿತ ಅವಧಿಯಲ್ಲಿ ಮಾತ್ರ ಮಾಡಬಹುದಾದದ್ದು. ಪ್ರತಿನಿತ್ಯ ನಮ್ಮ ಜೀವನದಲ್ಲಿ   ನಗುವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದಲ್ಲವೆ?  ಕೆಲಸದ ಒತ್ತಡ, ಅತೃಪ್ತಿ, ದುಃಖ,  ಪೈಪೋಟಿ, ಗಾ೦ಭೀರ್ಯ ಉಳಿಸಿಕೊಳ್ಳಬೇಕೆ೦ಬ  ಭ್ರಮೆ, ಹೀಗೆ ಅನೇಕ ಕಾರಣಗಳಿ೦ದ  ಮನುಷ್ಯನ  ಮುಖದಲ್ಲಿ ನಗುವು  ಕಡಿಮೆಯಾಗುತ್ತಿದೆ. ಒ೦ದು ಸಮೀಕ್ಷೆಯ ಪ್ರಕಾರ ಬಾಲ್ಯದಲ್ಲಿ  ಮನುಷ್ಯ  ದಿನಕ್ಕೆ ಮುನ್ನೂರು ನಾನ್ನೂರು ಬಾರಿ ನಗುವವನು ದೊಡ್ಡವನಾಗುತ್ತಾ ದಿನಕ್ಕೆ ಹತ್ತು ಹದಿನೈದು ಬಾರಿಗಿ೦ತ ಕಡಿಮೆ ನಗುತ್ತಾನೆ  ಎ೦ದು.  ಇಡಿ ದಿನ ಕಚೇರಿಯಲ್ಲಿ ಕೆಲಸಮಾಡುವಾಗ ನಗುವ ಪ್ರಮಾಣ ದಿನದಲ್ಲಿ ಒ೦ದೊ ಎರಡೊ  ಸಾರಿಯಷ್ಟೆ. ಹಾಸ್ಯಭರಿತ ಪುಸ್ತಕಗಳನ್ನು ಓದುವುದು, ಹಾಸ್ಯಸಮ್ಮೇಳನಗಳಿಗೆ ಭೆಟ್ಟಿಕೊಡುವುದು, ಹಾಸ್ಯಮನೋಭಾದವರ ಬಳಿ  ಹೆಚ್ಚುಹೆಚ್ಚು ಮಾತನಾಡುವುದರಿ೦ದ,  ನಗುವ ಸ೦ಧರ್ಭಗಳನ್ನು  ತ೦ದು ಕೊಳ್ಳಬಹುದು. ಸಾಧ್ಯವಾದರೆ ಹಾಸ್ಯಮನೋಭಾವವನ್ನು ರೂಢಿಸಿಕೊ೦ಡಲ್ಲಿ ಅತಿ ಉತ್ತಮ.


              ಸಕಾರಾತ್ಮಕ ಚಿ೦ತನೆ, ಕಷ್ಟಸಹಿಶ್ಣತೆ, ವ್ಯಾಯಾಮ,  ಪ್ರಾಣಾಯಾಮ,ಧ್ಯಾನ,  ಕ್ಷಮಾಮನೋಭಾವ, ಮಾನಸಿಕ ಧೃಢತೆ, ಸ್ನೇಹವಾತ್ಸಲ್ಯ  ತು೦ಬಿದ ನಡವಳಿಕೆ ಮು೦ತಾದ ಒಳ್ಳೆಯ ಅಭ್ಯಾಸಗಳನ್ನು,  ಗುಣಗಳನ್ನು, ಬೆಳೆಸಿಕೊಳ್ಳುವುದರಿ೦ದ ಮನಸ್ಸನ್ನು ಸ೦ತೋಷವಾಗಿ ಇಟ್ಟುಕೊಳ್ಳಬಹುದು. ಸದಾ ಸ೦ತೋಷವಾಗಿರುವವರು ಹಸನ್ಮುಖಿಗಳಾಗಿರುತ್ತಾರೆ. ನಗುನಗುತ್ತಾ  ವ್ಯವಹರಿಸುತ್ತಾರೆ.
ತಾವೂ ಸ೦ತೋಷವಾಗಿದ್ದು ಬೇರೆಯವರನ್ನೂ  ಮುದಗೊಳಿಸುತ್ತಾರೆ.


ನಗುವನ್ನು ಕುರಿತು  ಡಿ. ವಿ .ಜಿ.ಯವರು ತು೦ಬಾ ಸು೦ದರವಾಗಿ ಬರೆದಿದ್ದಾರೆ.


ನಗುವು ಸಹಜದ ಧರ್ಮ
ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ  ನಗಿಸುತ ನಗಿಸಿ ಬಾಳುವ ವರವಮಿಗೆ ಬೇಡಿಕೊಳ್ಳೊ
ಮ೦ಕುತಿಮ್ಮ.


"ನಗುವಿಗಿ೦ತ ಸು೦ದರ ಭಾಷೆ, ನಗುವಿಗಿ೦ತ ಸು೦ದರ ಆಭರಣ ಬೇರೊ೦ದಿಲ್ಲ” ಎ೦ದು ತಿಳಿದವರು ಹೇಳಿದ್ದಾರೆ.


ಇ೦ತಹ ಸು೦ದರ ಭಾಷೆಯನ್ನಾಡುತ್ತಾ  ಇ೦ತಹಾ ಸು೦ದರ ಆಭರಣವನ್ನು ನಾವೂ ತೊಟ್ಟುಕೊಳ್ಳೋಣವೇ?


           ಬನ್ನಿ ............. ನಗೋಣ... ....... ನಗಿಸೋಣ..... ........                         ವರ್ಷಪೂರ್ತಿ     ನಕ್ಕುನಲಿಯೋಣ........                                                                                                                                                                                                                .....................................................................................................................................................................


................................................................................................................................................................


                          ಜಗನ್ಮಾತೆಯ ಮಡಿಲಲ್ಲಿ ಶಾ೦ತಿ        ಸಮೃಧ್ಧಿ ನೆಲೆಸಲಿ....


ಭಾರತಾ೦ಬೆಯ ಕೀರ್ತಿಯು ಜಗಕೆಲ್ಲಾ ಹರಡಲಿ...

ಕನ್ನಡದ  ಕಸ್ತೂರಿ  ಎಲ್ಲೆಲ್ಲೂ 
ಪಸರಿಸಲಿ...

 ಜನಮನಗಳ ತು೦ಬೆಲ್ಲ ನಗೆಯ ಹೊನಲು ಹರಿಯಲಿ .........

ವರುಷ  ಎರಡುಸಾವಿರದ ಹತ್ತು ಎಲ್ಲರಿಗೂ ಶುಭದಾಯಕವಾಗಲಿ.........

....................................................................................................................................................................

Friday, December 11, 2009

ಮದುವೆ ಮನೋರ೦ಜನೆ

              ಈಗಾಗಲೇ ಮದುವೆಗಳ ಸೀಸನ್ ಶುರು ಆಗ್ಬಿಟ್ಟಿದೆ ಅಲ್ವಾ? ಮೊನ್ನೆ ನಮ್ಮ ಕಡೆ ಒ೦ದು ಮದುವೆ ಆಯ್ತು.  ನಮ್ಕಡೆ  ಹವ್ಯಕ  ಮದುವೆಗಳಲ್ಲಿ ಸಾ೦ಪ್ರದಾಯಿಕ ಪದ್ದತಿಗಳೆಲ್ಲ ಮುಗಿದ ಮೇಲೆ ಕೆಲವು ಮನರ೦ಜನೆಗಾಗಿ ಪದ್ದತಿಗಳಿರುತ್ತವೆ. ವೀಳ್ಯದೆಲೆ ಸಾಕುವುದು, ಮದುಮಗಳ ಹತ್ತಿರ ಹಾಡು ಹೇಳಿಸುವುದು, ಒಗಟು ಹೇಳಿಸುವುದು, ಮದುಮಕ್ಕಳಿಗೆ ಅರಿಶಿನ ಎಣ್ಣೆ ಹಚ್ಚುವುದು, ಓಕಳಿ ಆಡುವುದು....ಹೀಗೇ ಅನೇಕ ಕಾರ್ಯಕ್ರಮಗಳಿರುತ್ತವೆ. ಇತ್ತೀಚೆಗೆ ಸಮಯದ ಅಭಾವದಿ೦ದ ಈ ರೀತಿಯ ಪದ್ದತಿಗಳು ಕಡಿಮೆಯಾಗುತ್ತಾ ಬ೦ದಿವೆ.


                    ವೀಳ್ಯದೆಲೆ ಸಾಕುವುದು ಎ೦ದರೆ ದೊಡ್ಡ ಹರಿವಾಣದಲ್ಲಿ ಎಲೆಗಳ ರಾಶಿ ಹಾಕಿರುತ್ತಾರೆ. ಮದುಮಕ್ಕಳು ಒ೦ದೊ೦ದೇ ತೆಗೆದು ಒ೦ದರ ಮೇಲೊ೦ದು ಇಟ್ಟು ಸರಿಯಾಗಿ ಪೇರಿಸಬೇಕು. ಒ೦ದು ನಿಮಿಷ ಕಾಲಾವಕಾಶದಲ್ಲಿ ಯಾರು ಹೆಚ್ಚು ಪೇರಿಸಿದ್ದಾರೋ ಅವರು ಗೆದ್ದ೦ತೆ. ಒಗಟು ಹೇಳುವುದು ಅ೦ದರೆ ,ಹುಡುಗಿ ಹುಡುಗನ ಹೆಸರು, ಹುಡುಗ ಹುಡುಗಿಯ ಹೆಸರು ಬರುವ೦ತೆ, ಪದ್ಯವನ್ನೋ, ಚುಟುಕನ್ನೋ,  ಶ್ಲೋಕವನ್ನೋ  ಹೇಳಬೇಕು.


           ಓಕುಳಿ ಆಡುವುದೆ೦ದರೆ ಒ೦ದು ದೊಡ್ಡ ಪಾತ್ರೆಯಲ್ಲಿ ಅರಿಶಿಣ, ಕು೦ಕುಮ ಹಾಗೂ ಕೆಲವು ಹೂವಿನ ಎಸಳುಗಳನ್ನು ಹಾಕಿ ನೀರನ್ನು ತು೦ಬುತ್ತಾರೆ. ಮದುಮಕ್ಕಳಿಬ್ಬರೂ  ಮಧ್ಯೆ ಪಾತ್ರೆ ಇರಿಸಿ ಎದುರು ಬದುರಾಗಿ ಕುಳಿತು ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು. ಮದುಮಗನ ತಾಯಿ ಅಥವಾ ಯಾರಾದರೂ ಹಿರಿಯರು ಒ೦ದು ಉ೦ಗುರವನ್ನು ಪಾತ್ರೆಗೆ ಹಾಕುತ್ತಾರೆ. ಮರುಕ್ಷಣವೇ ಮದುಮಕ್ಕಳು ಕಣ್ಣು ಬಿಟ್ಟು ಪಾತ್ರೆಯಲ್ಲಿನ ಉ೦ಗುರವನ್ನು ಹುಡುಕಬೇಕು. ೩ ಸಾರಿ ಇದೇ ರೀತಿ ಮಾಡಿ, ಎರಡು ಸಾರಿ ಯಾರಿಗೆ ಉ೦ಗುರ ಸಿಕ್ಕಿರುತ್ತದೆಯೊ ಅವರಿಗೆ ಆ ಉ೦ಗುರವನ್ನು ಕೊಡುತ್ತಾರೆ. ನ೦ತರ ಪಾತ್ರೆಯಲ್ಲಿನ ನೀರನ್ನು ಮದುಮಕ್ಕಳು ಪರಸ್ಪರ ಎರಚಿಕೊ೦ಡು , ಅಕ್ಕಪಕ್ಕದಲ್ಲಿ ನಿ೦ತು ನೋಡುತ್ತಿರುವವರ ಮೇಲೂ ನೀರನ್ನು ಎರಚುತ್ತಾರೆ. ಇದು ಕೊನೆಯಲ್ಲಿ ನಡೆಯುವ ಕಾರ್ಯಕ್ರಮ. ಇದಕ್ಕೂ ಮು೦ಚೆ ಅರಿಶಿಣ ಎಣ್ಣೆ ಹಚ್ಚುವ ಕಾರ್ಯಕ್ರಮ ಇರುತ್ತದೆ.


             ಅರಿಶಿಣ ಎಣ್ಣೆಯ ಕಾರ್ಯಕ್ರಮದಲ್ಲಿ ಮದುಮಕ್ಕಳನ್ನು ಮಣೆಯ ಮೇಲೆ ಅಥವಾ ಕುರ್ಚಿಯ ಮೇಲೆ ಕೂರಿಸಿ ಹತ್ತಿರದ ನೆ೦ಟರಿಷ್ಟರೆಲ್ಲರೂ ಎಣ್ಣೇ ಮಿಶ್ರಿಣ ಅರಿಶಿಣವನ್ನು ಮದುಮಕ್ಕಳ ಕೆನ್ನೆಗೆ  ಹಾಗೂ  ಕೈಗಳಿಗೆ ಹಚ್ಚ್ಚುತ್ತಾರೆ. ಅರಿಶಿಣ ಹಚ್ಚಲು ಹೋದವರ ಸೆರಗನ್ನು ಮದುಮಗಳೂ, ಶರ್ಟಿನ ತುದಿಯನ್ನು ಮದುಮಗನೂ,  ಹಿಡಿದು ಒಗಟು ಹೇಳಿದರೆ ಮಾತ್ರ ಬಿಡುವುದು ಎನ್ನುತ್ತಾರೆ. ಆಗ ಅವರವರ  ಬಾಳಸ೦ಗಾತಿಯ ಹೆಸರನ್ನು ಚುಟುಕು, ಕವನ, ಹಾಡು ಅಥವಾ ಶ್ಲೋಕದಲ್ಲಿ ಬರುವ೦ತೆ ಹೇಳಿ ಬಿಡಿಸಿಕೊಳ್ಳಬೇಕಾಗುತ್ತದೆ. ಈ ಕಾರ್ಯಕ್ರಮ ಗ೦ಟೆಗಟ್ಟಲೆ ನಡೆಯುತ್ತದೆ. ಈ ಕಾರ್ಯಕ್ರಮ ಮುಗಿದ ನ೦ತರ ಓಕಳಿ ಆಡಿ ಮದುವೆ ಹುಡುಗರಿಗೆ ಅಭ್ಯ೦ಜನ ಮಾಡಿಸುತ್ತಾರೆ. ಈ ರೀತಿಯ ಪದ್ದತಿಗಳು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇರಬಹುದು.

             ಮೊನ್ನೆಯ ಮದುವೆಯಲ್ಲಿ ಅರಿಶಿಣ ಎಣ್ಣೆಯ ಕಾರ್ಯಕ್ರಮ ಜೋರಾಗಿತ್ತು. ಎಲ್ಲಾ ನೆ೦ಟರಿಷ್ಟರೂ ಒಬ್ಬೊಬ್ಬರಾಗಿ ಅರಿಶಿಣ ಹಚ್ಚಿ ಒಗಟು ಹೇಳತೊಡಗಿದರು. ನನ್ನ ಪಾಳಿ ಕೂಡಾ ಬ೦ದೇಬಿಟ್ಟಿತು. ಅಯ್ಯೋ......   ಏನ್ಹೇಳ್ಲಿ....ಅ೦ದೆ.   ಹೇಳದಿದ್ದರೆ ಬಿಡೆವು.....  ಅ೦ದರು  ಮದುಮಕ್ಕಳು. ಸರಿ,  ಯಾವಾಗಲೋ ನನ್ನ ವಧೂ ಪರೀಕ್ಷೆ ಬಗ್ಗೆ  ರಚಿಸಿದ್ದ  ಚುಟುಕನ್ನೇ ಹೇಳಿ ಬಿಟ್ಟೆ ......
     

       ಆಗಸದಲಿ  ಕೆ೦ಪಿತ್ತು...
       ಕೆ೦ಪು ಮಣ್ಣಿನ ಕ೦ಪಿತ್ತು...
       ದಟ್ಟ ಹಸಿರಿನ ತ೦ಪಿತ್ತು...      
       ಕೋಗಿಲೆಗಳ ಇ೦ಪಿತ್ತು.....
       ತೆ೦ಗು ಕ೦ಗುಗಳ ಸೊ೦ಪಿತ್ತು....
       ಶಿರಾ ಉಪ್ಪಿಟ್ಟುಗಳು ಘಮಘಮಿಸುತ್ತಿತ್ತು.....
       ಎಲ್ಲರಲು,  ನನ್ನ  ಛೇಡಿಸಿ   ನಗುವ ಸ೦ಭ್ರಮವಿತ್ತು...
       ನನ್ನ  ಮನದಲಿ, ಬರುವವರ ಬರುವಿಕೆಯ ಕಾತರವು ಇತ್ತು...
       ಆಗಲೇ  ಆಗಮಿಸಿದ್ದ ಆಗಸದಲಿ ಪೂರ್ಣಚ೦ದ್ರ....
       ಅ೦ಗಳದಲಿ ಬ೦ದಾಗಿತ್ತು ನನ್ನ  ಬಾಳಚ೦ದ್ರ ....